ಡ್ರಗ್ಸ್ ಮುಕ್ತ ಕುದ್ರೋಳಿ ಗೆ ಪಣತೊಟ್ಟ ಮುಸ್ಲಿಂ ಐಕ್ಯತಾ ವೇದಿಕೆ; ಆಗಸ್ಟ್ 8 ಕ್ಕೆ ಬೃಹತ್ ರ್ಯಾಲಿ, 9 ಕ್ಕೆ ಜನಜಾಗೃತಿ ಸಮಾವೇಶ
ಮಂಗಳೂರು: ಇತ್ತೀಚಿಗೆ ಮಿತಿ ಮೀರಿದ ಡ್ರಗ್ಸ್ ಮಾರಾಟ ಮತ್ತು ಸೇವನೆಯಿಂದ ಯುವ ಪೀಳಿಗೆಯು ದಾರಿ ತಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ವಲಯದಲ್ಲಿ ಬಾರೀ ಆಕ್ರೋಶದ ಅಲೆಯೆದ್ದಿದೆ. ಕುದ್ರೋಳಿಯಲ್ಲಿ ಐದು ಮಸೀದಿ ಆಡಳಿತ ಮಂಡಳಿ,ಸಂಘ ಸಂಸ್ಥೆಗಳ ಪ್ರತಿನಿಧಿಯನ್ನೊಳಗೊಂಡ ಮುಸ್ಲಿಂ ಐಕ್ಯತಾ ವೇದಿಕೆ ಯು ಕಳೆದ ಒಂದು ತಿಂಗಳಿನಿಂದಡ್ರಗ್ಸ್ ಮುಕ್ತ ಕುದ್ರೋಳಿ, ಯುವ ಪೀಳಿಗೆಯ ರಕ್ಷಣೆಯೇ ನಮ್ಮ ಗುರಿ ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಳೆದ ವಾರದಲ್ಲಿ ಐದು ಮಸೀದಿಯ ವ್ಯಾಪ್ತಿಯ ಸುಮಾರು 2000 ಸಾವಿರದಷ್ಟು ಮನೆ ಮನೆಗೆ ನಾಯಕರು ನಾಗರಿಕರ ಸಹಕಾರದೊಂದಿಗೆ ತೆರಳಿ ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸಲಾಗಿದೆ. ಇದೀಗ ಆಗಸ್ಟ್ 8 ರಂದು ಸಾಯಂಕಾಲ 5.00 ಕ್ಕೆ ಸರಿಯಾಗಿ ಜಾಮಿಅ ಮಸೀದಿ ಕುದ್ರೋಳಿ ಯಿಂದ ಕಂಡತ್ ಪಳ್ಳಿ ಜುಮಾ ಮಸೀದಿಯವರೆಗೆ ಬೃಹತ್ ಜನಜಾಗೃತಿ ರ್ಯಾಲಿ ನಡೆಯಲಿದೆ.
ದಿನಾಂಕ 09-08-2023 ಬುಧವಾರ ರಾತ್ರಿ 7.15 ಕ್ಕೆ ಉರ್ದು ಶಾಲೆ ಕುದ್ರೋಳಿ ಜಂಕ್ಷನ್ ನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ದಿ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್ ಹಾಜ್ ಕೆ ಎಸ್ ಮುಹಮ್ಮದ್ ಮಸೂದ್ ವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಪೋಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ IPS, ಮೊಟಿವೇಷನಲ್ ಸ್ಪೀಕರ್ ರಫೀಕ್ ಮಾಸ್ಟರ್, ವಿಠೋಭ ಭಜನಾ ಮಂದಿರ ಕಾರ್ಯದರ್ಶಿ ಶ್ರೀ ನಾರಾಯಣ ಕರ್ಕೇರ, ಕುದ್ರೋಳಿ ಯುವಕ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಯಾಸೀನ್ ಕುದ್ರೋಳಿ, ಮಾಜಿ ಮೇಯರ್ ಕೆ ಅಶ್ರಫ್, ಹಾಜಿ ಅಬೂಬಕ್ಕರ್, ಎಚ್ ಬಿಟಿ ಕಾರ್ಪೋರೇಟರ್ ಶಂಸುದ್ದೀನ್, ಮಕ್ಬೂಲ್, ಅಬ್ದುಲ್ ಅಝೀಝ್, ನಡುಪಳ್ಳಿ ಅಧ್ಯಕ್ಷರಾದ ಫಝಲ್ ಮುಹಮ್ಮದ್, ಮೊಹ್ದಿನ್ ಪಳ್ಳಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಎಚ್ ಬಿಟಿ, ಸಲಫಿ ಮಸ್ಜಿದ್ ಅಧ್ಯಕ್ಷರಾದ ನಾಸಿರ್ ಐಕೋ , ಕಂಡತ್ ಪಳ್ಳಿ ಅಧ್ಯಕ್ಷರಾದ ಶಮೀಮ್ ಉಪಸ್ಥಿತರಿಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಊರಿನ ಪ್ರತಿಯೊಬ್ಬ ನಾಗರಿಕರಿಗೂ ಡ್ರಗ್ಸ್ ಬಗ್ಗೆ ಆಗುವ ಅನಾಹುತಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ತಮ್ಮ ಮಕ್ಕಳ ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ.ಎಂದು ಮುಸ್ಲಿಂ ಐಕ್ಯತಾ ವೇದಿಕೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.