ಸರಕಾರ ಸ್ಪಂದಿಸದಿದ್ದರೆ ಆತ್ಮಹತ್ಯೆಯೇ ಗತಿ: ಪ್ರಾಥಮಿಕ- ಪ್ರೌಢಶಾಲಾ ಅತಿಥಿ ಶಿಕ್ಷಕರ ಅಳಲು

Update: 2024-02-17 08:10 GMT

ಮಂಗಳೂರು, ಫೆ. 17: ರಾಜ್ಯದಲ್ಲಿ ಸುಮಾರು 43,000ದಷ್ಟಿರುವ, ದ.ಕ. ಜಿಲ್ಲೆಯಲ್ಲಿ ಸುಮಾರು 900ರಷ್ಟಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ ಸ್ಪಂದಿಸದಿದ್ದರೆ ಆತ್ಮಹತ್ಯೆಯೇ ತಮ್ಮ ಮುಂದಿನ ದಾರಿಯಾಗಲಿದೆ ಎಂದು ಜಿಲ್ಲೆಯ ಅತಿಥಿ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾಮಣಿ ಕೆ., ಶಿಕ್ಷಕರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಗೌರವಧನ ದೊರಕಿಲ್ಲ. ಸಾಮಾನ್ಯ ಶಿಕ್ಷಕರ ಭಾರವನ್ನೂ ಹೊತ್ತುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ದಿನವೊಂದಕ್ಕೆ ತಲಾ 333 ರೂ.ನಂತೆ ಮಾಸಿಕ 10,000 ಗೌರವಧನ ಮಾತ್ರ ಪಡೆಯುತ್ತಿದ್ದಾರೆ. ಈ ವೇತನದಲ್ಲಿ ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದರು.

ಹಲವು ಬಾರಿ ಮನವಿ ಅಭಿಯಾನ, ಶಾಲೆ ತೊರೆಯೋಣ ಅಭಿಯಾನದ ಮೂಲಕ ಸರಕಾರದ ಗಮನ ಸೆಳೆದರೂ ಸಮಸ್ಯೆ ಬಗೆಹರಿದಿಲ್ಲ. ಮೆರಿಟ್ ಪದ್ಧತಿ ಕೈ ಬಿಟ್ಟು ಸೇವಾನನುಭವದ ಆಧಾರದಲ್ಲಿ ನೇಮಕಾತಿ ಮಾಡಬೇಕು. ಸೇವಾ ಭದ್ರತೆ ಒದಗಿಸಬೇಕು. ಸೇವಾ ಪ್ರಮಾಣ ಪತ್ರ ನೀಡಬೇಕು. ಗೌರವಧನ ಹೆಚ್ಚಿಸುವ ಜತೆಗೆ ಅದನ್ನು ಪ್ರತೀ ತಿಂಗಳು ನಿಗದಿತ ಸಮಯಕ್ಕೆ ಒದಗಿಸಬೇಕು. ವರ್ಷದ 12 ತಿಂಗಳು ವೇತನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸರಕಾರಿ ಶಾಲೆಗಳಲ್ಲಿ ಕ್ಲರ್ಕ್ ಹುದ್ದೆಗಳು ಬಾಕಿಯಾಗಿದ್ದು, ನೇಮಕಾತಿ ಸಂದರ್ಭ ಟಿಇಟಿ, ಸಿಇಟಿ ಪರಿಗಣನೆಯ ಬದಲು ಸೇವಾನುಭವ ಹೊಂದಿದವರಿಗೆ ಆ ಹುದ್ದೆಯನ್ನಾದರೂ ಒದಗಿಸಲು ಸರಕಾರ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷೆ ಚಂದ್ರಿಕಾ, ಕೋಶಾಧಿಕಾರಿ ರೇವತಿ, ಬಂಟ್ವಾಳ ಘಟಕದ ಅಮಿತಾ, ಸದಸ್ಯೆ ಪ್ರಮೀಳಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News