ಬಡವರ ಬಿಪಿಎಲ್ ಕಾರ್ಡ್ ರದ್ದು ಪಡಿಸಿದಲ್ಲಿ ದೊಡ್ಡ ಮಟ್ಟದ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ

Update: 2024-10-18 14:37 GMT

ಪುತ್ತೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದಲ್ಲಿ 12 ಲಕ್ಷ ಬಿಪಿಎಲ್ ಕಾರ್ಡ್‍ಗಳನ್ನು ಅನಧಿಕೃತ ಬಿಪಿಎಲ್ ಕಾರ್ಡ್‍ಗಳೆಂದು ಗುರುತಿಸಿ ರದ್ದುಗೊಳಿಸಲು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಕ ಮುಂದಾಗಿದೆ ಎಂದು ತಿಳಿದು ಬದಿದ್ದು, ಬಡವರ ಬಿಪಿಎಲ್ ಕಾರ್ಡ್ ರದ್ದುಗೊಳಿಸದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಅವರು ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪುತ್ತೂರಿಗೆ ಆಗಮಿಸಿದ್ದ ಅವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಉಡುಪಿ ಜಿಲ್ಲೆಯಲ್ಲಿ ಸುಮಾರು 38 ಸಾವಿರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50 ಸಾವಿರ ಬಿಪಿಎಲ್ ಕಾರ್ಡ್‍ಗಳನ್ನು ಅನಧಿ ಕೃತ ಎಂಬ ಹಣೆಪಟ್ಟಿ ಕಟ್ಟಿ ಗುರುತಿಸಲಾಗಿದೆ. ಶ್ರೀಮಂತರಲ್ಲಿ ಬಿಪಿಎಲ್ ಕಾರ್ಡ್‍ಗಳಿದ್ದರೆ ರದ್ದು ಮಾಡುವುದಕ್ಕೆ ನಮ್ಮ ಆಕ್ಷೇಪ ವಿಲ್ಲ. ಆದರೆ ಬಡವರಿಗೆ ಅನ್ಯಾಯ ಆಗಬಾರದು. ಸರಕಾರ ಗೃಹಲಕ್ಷ್ಮೀ ಮೂಲಕ ನೀಡುತ್ತಿರುವ ಮಾಸಿಕ 2 ಸಾವಿರ ರೂ.ಗಳನ್ನು ಬಿಪಿಎಲ್ ಕಾರ್ಡ್‍ದಾರರಿಗೆ ಮಾತ್ರ ಸೀಮಿತಗೊಳಿಸಬೇಕೆಂಬ ಚರ್ಚೆ ನಡೆಯುತ್ತಿರುವ ಹೊತ್ತಲ್ಲಿ ಈ ರೀತಿ 12 ಲಕ್ಷ ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಮಾಡಿದರೆ ಗೃಹಲಕ್ಷ್ಮೀಯ ಹಣ ಒಂದಷ್ಟು ಉಳಿತಾಯ ಮಾಡಬಹುದು ಎಂಬ ಲೆಕ್ಕಾಚಾರ ಸರಾರದಲ್ಲಿದೆಯೇ ಎಂಬ ಗುಮಾನಿ ಇದೆ.

1993ರ ಅವಧಿಯಲ್ಲಿ ಗ್ರಾಪಂಗಳು ಅಸ್ತಿತ್ವಕ್ಕೆ ಬಂದಾಗ ಗ್ರಾಪಂ ಸದಸ್ಯರಿಗೆ 20 ರೂ. ಸಿಟ್ಟಿಂಗ್ ಫೀಸ್ ನೀಡಲಾಗುತ್ತಿತ್ತು. ಅದು ನಿಧಾನವಾಗಿ ಏರುತ್ತಾ ಬಂದಿದ್ದು, 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಸರಕಾರ 27 ಕೋಟಿ ಗೌರವ ಧನ ಬಿಡು ಗಡೆ ಮಾಡಿತ್ತು. 2021ರಲ್ಲಿ ನಾನು ವಿಧಾನ ಪರಿಷತ್ ಸದಸ್ಯನಾಗಿ ಮರು ಆಯ್ಕೆಯಾದ ಬಳಿಕ ಸರಕಾರದ ಗಮನ ಸೆಳೆದು ಗ್ರಾಪಂ ಸದಸ್ಯರ ಗೌರವ ಧನ 1ರಿಂದ 2 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರದಿಂದ 4 ಸಾವಿರ, ಅಧ್ಯಕ್ಷರಿಗೆ 3ರಿಂದ 6 ಸಾವಿರಕ್ಕೆ ಏರಿಸಲಾಯಿತು. ನಾವು ನಿರಂತರವಾಗಿ ಪಂಚಾಯಿತಿ ರಾಜ್ ವ್ಯವಸ್ಥೆ ಬಲಪಡಿಸಲು ಯತ್ನಿಸುತ್ತಿ ದ್ದೇವೆ. ಆದರೆ ಕಾಂಗ್ರೆಸ್ ಸರಕಾರಕ್ಕೆ ಇದರಲ್ಲಿ ಆಸಕ್ತಿಯಿಲ್ಲ. ಅದು ಪಂಚಾಯತ್‍ರಾಜ್ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕಿಶೋರ್ ಬೊಟ್ಯಾಡಿ ಅವರಂಥ ಒಬ್ಬ ಅತ್ಯಂತ ಸಣ್ಣ ಸಮುದಾಯದ ತರುಣನಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಚಾರಿತ್ರಿಕ ನಿರ್ಧಾರ. ಉಭಯ ಜಿಲ್ಲೆಯಲ್ಲಿರುವ 6040 ಮತದಾರರ ಪೈಕಿ ಈಗಾಗಲೇ ಬಿಜೆಪಿ 1600 ಮತಗಳಿಂದ ಮುಂದಿದೆ. ಇದಲ್ಲದೆ ಇತರ ಪಕ್ಷಗಳ ಮತಗಳೂ ಕೂಡ ನಮಗೆ ಸಿಕ್ಕಿ ದೊಡ್ಡ ಮಟ್ಟದ ಗೆಲುವು ಸಾಧಿಸುವ ಮೂಲಕ ಪಂಚಾಯತ್‍ರಾಜ್ ವ್ಯವಸ್ಥೆ ಬಲಪಡಿಸಬೇಕೆಂಬುದು ನಮ್ಮ ಒತ್ತಾಸೆ. ಈಗಾಗಲೇ 2 ಸುತ್ತಿನ ಪ್ರಚಾರ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್, ಪುತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ನಿತೀಶ್ ಕುಮಾರ್ ಶಾಂತಿವನ, ಸಂತೋಷ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News