ಕರಾವಳಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ವೇಳೆ ಸೂಕ್ಷ್ಮ ಪ್ರದೇಶಗಳ ರಕ್ಷಣೆ ಅಗತ್ಯ: ಸಂಸದ ಬ್ರಿಜೇಶ್ ಚೌಟ
ಮಂಗಳೂರು, ಫೆ.19: ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವಾಗ ದ್ವೀಪಗಳು ಸೇರಿದಂತೆ ಸೂಕ್ಷ್ಮ ಕರಾವಳಿ ಪ್ರದೇಶಗಳನ್ನು ರಕ್ಷಿಸಬೇಕಾಗಿರುವುದು ಅಗತ್ಯ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕರ್ನಾಟಕ ಪ್ರವಾಸೋದ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆಯೂ ಸೇತುವೆಗಳ ಕುಸಿತಕ್ಕೂ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಕರಾವಳಿ ಕರ್ನಾಟಕದಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಅನೇಕ ಹೂಡಿಕೆದಾರರು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.
*ತಪ್ಪು ಕಲ್ಪನೆ ದೂರ ಮಾಡಬೇಕು: ಮಂಗಳೂರು ಅಪಾಯಕಾರಿ ಅಥವಾ ಅಸುರಕ್ಷಿತವಲ್ಲ. ಆದರೆ ಇಲ್ಲಿನ ಕೆಲವು ಘಟನೆಗಳಿಂದಾಗಿ ಹೊರಗಿನವರಲ್ಲಿ ಮಂಗಳೂರಿನ ಬಗ್ಗೆ ತಪ್ಪು ಕಲ್ಪನೆ ಇದೆ. ಇದು ದೂರವಾಗಬೇಕು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಪ್ರವಾಸೋದ್ಯಮ ಪ್ರಸ್ತಾವನೆಗಳಲ್ಲಿ ಕನಿಷ್ಠ ಎರಡು ಕ್ರೀಡೆಗಳನ್ನು ಸೇರಿಸಬೇಕೆಂದು ಆಡಳಿತವನ್ನು ಒತ್ತಾಯಿಸಿದರು. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಗೌರವ್ ಹೆಗ್ಡೆ ಅವರು ಕರಾವಳಿ ಅಭಿವೃದ್ಧಿಗೆ ಆರು ಪ್ರಮುಖ ಅಂಶಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ‘ರೋಡ್ ಮ್ಯಾಪ್ : ಡಾ. ಕೆ.ಎ. ರಾಜೇಂದ್ರ
ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆದು ರೋಡ್ ಮ್ಯಾಪ್ ತಯಾರಿಸಲಾಗುವುದು ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ. ಕೆ.ಎ. ರಾಜೇಂದ್ರ ತಿಳಿಸಿದ್ದಾರೆ.
ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಯೋಜನೆಯನ್ನು ಮಂಗಳೂರಿನಿಂದಲೇ ಆರಂಭಿಸಲು ಚಿಂತನೆ ನಡೆಸಲಾ ಗಿದೆ. ಕರಾವಳಿ ಸಂಸ್ಕೃತಿ, ಆಹಾರ , ಸಂಪ್ರದಾಯ ವಿದೇಶಿಯರಿಗೂ ಗೊತ್ತಾಗಬೇಕು. ಅವರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಂಬಳ, ಭೂತದಕೋಲ ಮತ್ತು ಈ ಪ್ರದೇಶದ ವಾರ್ಷಿಕ ಕಾರ್ಯಕ್ರಮಗಳು, ಉತ್ಸವಗಳ ಕ್ಯಾಲೆಂಡರ್ಅನ್ನು ಸಿದ್ಧಪಡಿಸಲಾಗುವುದು ಎಂದು ಡಾ. ರಾಜೇಂದ್ರ ಹೇಳಿದರು.
ಪ್ರವಾಸೋದ್ಯಮದ ಹೆಸರಲ್ಲಿ ಇಂತಹ ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ವಾಣಿಜ್ಯೀಕರಿಸುವುದು ನಮ್ಮ ಗುರಿಯಲ್ಲ. ಆದರೆ ಪ್ರವಾಸಿಗರು ಅದನ್ನು ನೋಡಿ ಅನುಭವಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
*ಕರ್ನಾಟಕ ಟ್ರಾವೆಲ್ ಎಕ್ಸ್ಪೊ: ಫೆಬ್ರವರಿ 26 ರಿಂದ 28 ರವರೆಗೆ ಬೆಂಗಳೂರಿನಲ್ಲಿ ಕರ್ನಾಟಕ ಇಂಟರ್ನ್ಯಾಶನಲ್ ಎಕ್ಸ್ಪೊ ಆಯೋಜಿಸಲಾಗಿದ್ದು, ಇದರಲ್ಲಿ 120 ವಿದೇಶಿ ಪ್ರವಾಸ ಆಯೋಜಕರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸ್ಟೇಕ್ಹೋಲ್ಡರ್ಗಳು ಕರಾವಳಿಯ ಉತ್ಪನ್ನಗಳೊಂದಿಗೆ ಸ್ಟಾಲ್ಗಳನ್ನು ಇಡುವಂತೆ ಅವರು ಕರೆ ನೀಡಿದರು.
*ಡಿಜಿಟಲ್ ಮೂಲಸೌಕರ್ಯ ವೇದಿಕೆ ಅಭಿವೃದ್ಧಿ: ಪ್ರವಾಸೋದ್ಯಮ ತಾಣಗಳನ್ನು ಉತ್ತೇಜಿಸಲು ಕರ್ನಾಟಕದಲ್ಲಿ ಡಿಜಿಟಲ್ ಮೂಲಸೌಕರ್ಯ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ರಾಜೇಂದ್ರ ಹೇಳಿದರು.
ಪ್ರವಾಸಿ ತಾಣಗಳು, ಪ್ರವಾಸ ನಿರ್ವಾಹಕರು, ಹತ್ತಿರದ ಹೋಟೆಲ್, ರೆಸಾರ್ಟ್ಗಳು ಮತ್ತು ಕಡಲತೀರಗಳ ವಿವರಗಳನ್ನು ಒಳಗೊಂಡ ವೆಬ್ಸೈಟ್ಗಳು ಸಂದರ್ಶಕರಿಗೆ ಸ್ಥಳಗಳ ಭೇಟಿಗಾಗಿ ಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಎಂದು ಅಭಿಪ್ರಾಯಪಟ್ಟರು.
*ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ ಫಾಹಿಮ್ ಮಾತನಾಡಿ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದ್ದರೂ, ನಮಗೆ ಅದರ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಿಲ್ಲ. 321 ಕಿಮೀ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಎಲ್ಲಿ ಹೆಚ್ಚು ಅವಕಾಶ ಇದೆ ಎನ್ನುವು ದನ್ನು ಕಂಡು ಹಿಡಿಯಲು ಈ ತನಕ ಸಾಧ್ಯವಾಗಲಿಲ್ಲ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ವಿಚಾರದ ಬಗ್ಗೆ ಹಲವು ಸಮಯಗಳಿಂದ ಚಿಂತನೆ ನಡೆಯುತ್ತಿದೆ. ಈಗ ಯೋಜನೆ ರೂಪಿಸಲು ಕಾಲ ಸನ್ನಿಹಿತವಾಗಿದೆ ಎಂದರು.
ಪ್ರವಾಸೋದ್ಯಮ ನೀತಿಯು ಸುಸ್ಥಿರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಪ್ರವಾಸೋದ್ಯಮವನ್ನು ಸಮತೋಲನ ಗೊಳಿಸುವ ಗುರಿಯನ್ನು ಹೊಂದಿದೆ ಎಂದರು.
ಇದೀಗ ಬೇರೆ ಸಂಘ ಸಂಸ್ಥೆಗಳ ಅಭಿಪ್ರಾಯವನ್ನು ಪಡೆದು ಯೋಜನೆ ರೂಪಿಸಲು ಕಾರ್ಯಾಗಾರವನ್ನು ಆಯೋಜಿಸ ಲಾಗಿದೆ. ಕರ್ನಾಟಕ ಮರೈನ್ ಬೋರ್ಡ್ , ಸ್ಮಾರ್ಟ್ ಸಿಟಿ, ಸಿಆರ್ಝೆಡ್ ಮತ್ತಿತರ ಇಲಾಖೆಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಕೆಪಿಎಂಜಿಯ ಯೋಜನಾ ವ್ಯವಸ್ಥಾಪಕ ಯಶ್ ಸಿನ್ಹಾ ಮಾತನಾಡಿ ಪ್ರವಾಸೋದ್ಯಮ ನೀತಿ 2024-29ರಲ್ಲಿ 25 ಪ್ರವಾಸೋದ್ಯಮ ವಿಷಯಗಳು ಮತ್ತು 44 ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಶಾಸಕರಾದ ಡಿ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮತ್ತಿತರರು ಭಾಗವಹಿಸಿದ್ದರು.