ಮಂಗಳೂರು ಮನಪಾದಿಂದ ವೀರಯೋಧರಿಗೆ ವಂದನೆ ಕಾರ್ಯಕ್ರಮ
ಮಂಗಳೂರು, ಆ.19: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದ ಅಂಗ ವಾಗಿ ‘ವೀರ ಯೋಧರಿಗೆ ವಂದನೆ’ ಕಾರ್ಯಕ್ರಮವು ಶನಿವಾರ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯ ಮಂಗಳಾ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ ಕಿಣಿ ಅವರನ್ನು ಸನ್ಮಾನಿಸಲಾಯಿತು. ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಲೆ.ಕರ್ನಲ್ ಎಂ, ಹರೇಂದ್ರನಾಥ್, ದಿ.ಜಾನ್ ವಿಕ್ಟರ್ ಮೆನೇಜಸ್, ದಿ. ಬಜಾಬ್ ಬೀಡು ಉಗ್ಗಪ್ಪ ಪಯ್ಯಡೆ, ದಿ.ಕೆ.ಮೋನಪ್ಪಶೆಟ್ಟಿ, ದಿ.ದಾಮೋದರ ಪ್ರಭು, ದಿ.ಪದ್ಮನಾಭ ರಾವ್ ಅವರ ಕುಟುಂಬಸ್ಥರನ್ನು ಗೌರವಿಸಲಾಯಿತು.
ಹುತಾತ್ಮ ಯೋಧ ಗಿರೀಶ್ ಅವರ ಕುಟುಂಬಸ್ಥರನ್ನು ಹಾಗೂ ಹುತಾತ್ಮ ಎಎಸೈಗಳಾದ ಚಂದ್ರಹಾಸ್ ಯು. ಮತ್ತು ಸದಾಶಿವ ಹಾಗೂ ಹೆಡ್ ಕಾನ್ಸ್ಟೇಬಲ್ ಎ.ಪಿ. ಭಾಸ್ಕರ ಅವರ ಕುಟುಂಬಸ್ಥರನ್ನು ಗೌರವಿಸಲಾಯಿತು.
ಮನಪಾ ಮೇಯರ್ ಜಯಾನಂದ್ ಅಂಚನ್, ಉಪ ಮೇಯರ್ ಪೂರ್ಣಿಮ, ಆಯುಕ್ತ ಆನಂದ್ ಸಿ.ಎಲ್., ಸಿಐಎಸ್ಎಫ್ ಡೆಪ್ಯೂಟಿ ಕಮಾಡೆಂಟ್ ಚಿರುತೋಷ್ ಗೌ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಕಾರ್ಪೊರೇಟರ್ ಸುಧೀರ್ ಶೆಟ್ಟಿ ಸ್ವಾಗತಿಸಿದರು. ನಿಸರ್ಗ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.