ರಾಹುಲ್‌ ಗಾಂಧಿಯ ನೇರ ನಿಷ್ಠುರ ಮಾತುಗಳು ಬಿಜೆಪಿಯ ಬುಡಕ್ಕೆ ಬೆಂಕಿ ಕಾಯಿಸಿದಂತಿದೆ: ದಿನೇಶ್‌ ಗುಂಡೂರಾವ್

Update: 2024-07-02 06:37 GMT

PC: X/Dineshgundurao

ಬೆಂಗಳೂರು: ನಿನ್ನೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಸಂಸತ್ತಿನಲ್ಲಿ ಆಡಿದ ನೇರ, ನಿಷ್ಠುರ ಮಾತುಗಳು ಬಿಜೆಪಿ ಯವರ ಬುಡಕ್ಕೆ ಬೆಂಕಿ ಕಾಯಿಸಿದಂತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಹಾಕಿರುವ ಅವರು, ರಾಹುಲ್‌ರವರ ಮಾತುಗಳನ್ನು ಅರಗಿಸಿಕೊಳ್ಳಲಾಗದ ಅಶೋಕ್‌ ರಂತಹ ರಾಜ್ಯ ಬಿಜೆಪಿ ನಾಯಕರು, ರಾಹುಲ್ ಭಾಷಣ ಸುಳ್ಳಿನ ಭಾಷಣ ಎಂದು ಒಂದಂಶದ ಷರಾ ಬರೆದಿದ್ದಾರೆ. ಇದೊಂದು ರೀತಿ ಕಂಡದನ್ನು ಕಂಡ ಹಾಗೇ ಹೇಳಿದರೆ ಕೆಲವರಿಗೆ ಕೆಂಡದಂತ ಕೋಪ ಎಂದ ಹಾಗೆ ಎಂದು ಹೇಳಿದ್ದಾರೆ

ರಾಹುಲ್‌ರವರು ನಿನ್ನೆ ಪ್ರಸ್ತಾಪಿಸಿದ ಅಂಶಗಳು ಮೋದಿ ಸರ್ಕಾರದ ಕಳೆದ ಹತ್ತು ವರ್ಷಗಳ‌ ಆಡಳಿತ ವೈಫಲ್ಯದ ಕೈಗನ್ನಡಿಯಾಗಿತ್ತು. ಸತ್ಯ ಯಾವಾಗಲೂ‌ ಕಹಿ ಎಂಬಂತೆ ರಾಹುಲ್‌ರವರ ಸತ್ಯದ ಮಾತುಗಳು ಬಿಜೆಪಿಯವರಿಗೆ ಅಜೀರ್ಣವಾಗಿದೆ‌ ಎಂದಿದ್ದಾರೆ.

ಚಲಾವಣೆಯಲ್ಲಿರಲು ಎಲ್ಲದಕ್ಕೂ ಪ್ರತಿಕ್ರಿಯಿಸುವ ಚಾಳಿ ಹೊಂದಿರುವ ಅಶೋಕ್‌ ರವರು ರಾಹುಲ್‌ ಗಾಂಧಿ ಯವರ ನಿನ್ನೆಯ ಭಾಷಣ ಮತ್ತೊಮ್ಮೆ ಕೇಳಿ ಪ್ರತಿಕ್ರಿಯಿಸಲಿ. ರಾಹುಲ್ ಹೇಳಿದಂತೆ 'ಅಗ್ನಿವೀರ್' ಯೋಜನೆ ಯುವ ಜನರನ್ನು ವಂಚಿಸುತ್ತಿರುವುದು ಸುಳ್ಳೆ.? ನೀಟ್ ಪರೀಕ್ಷಾ ಹಗರಣ ಸುಳ್ಳೆ.? ನಿರುದ್ಯೋಗ ಸಮಸ್ಯೆಯಿರುವುದು ಸುಳ್ಳೆ.? ಮೋದಿ ಸರ್ಕಾರ ಧರ್ಮದ ಆಧಾರದಲ್ಲಿ ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವುದು ಸುಳ್ಳೆ.? ಮಣಿಪುರದಲ್ಲಿ ರಕ್ತಪಾತವಾಗುತ್ತಿದ್ದಾಗ ಪ್ರಧಾನಿಯವರು ಬಾಯಿಗೆ ಬೀಗ ಹಾಕಿಕೊಂಡಿದ್ದು ಸುಳ್ಳೆ.? ರೈತರ ಬಹುದಿನದ ಬೇಡಿಕೆಯಾದ MSP ನಿರಾಕರಿಸುತ್ತಿರುವುದು ಸುಳ್ಳೆ.? ಮೋದಿಯವರು ಅಂಬಾನಿ-ಅದಾನಿಯವರ ಪವರ್ ಆಫ್ ಅಟಾರ್ನಿಯಂತೆ ಆಡಳಿತ ನಡೆಸುತ್ತಿರುವುದು ಸುಳ್ಳೆ.? ಯಾವುದು ಸುಳ್ಳು.? ಹೇಳಿ ಅಶೋಕ್‌ರವರೆ ಎಂದು ಸರಣಿ ಪರಶ್ನೆಗಳನ್ನು ಕೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News