ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಢಿಕ್ಕಿ: ಇಬ್ಬರು ಮಕ್ಕಳು ಮೃತ್ಯು

Update: 2024-05-29 07:43 GMT

Image Credit: navbharattimes.indiatimes.com

ಗೊಂಡಾ (ಉತ್ತರ ಪ್ರದೇಶ): ಕೈಸರ್ ಗಂಜ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್ ಭೂಷಣ್ ಸಿಂಗ್ ಅವರ ಬೆಂಗಾವಲು ವಾಹನವು ಢಿಕ್ಕಿ ಹೊಡೆದ ಪರಿಣಾಮ, ಇಬ್ಬರು ಮಕ್ಕಳು ಮೃತಪಟ್ಟು, ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನಲ್ ಗಂಜ್-ಹುಝೂರ್ ಪುರ್ ರಸ್ತೆಯಲ್ಲಿನ ಬೈಕುಂಠ್ ಪದವಿ ಕಾಲೇಜಿನ ಬಳಿ ನಡೆದಿದೆ ಎಂದು ವರದಿಯಾಗಿದೆ.

ಘಟನೆಯ ಬೆನ್ನಿಗೇ ಸ್ಥಳದಲ್ಲಿ ದೊಡ್ಡ ಸಂಖ್ಯೆಯ ಜನಸಂದಣಿ ಜಮಾವಣೆಗೊಂಡಿದ್ದು, ಪೊಲೀಸರು ಅಪಘಾತವೆಸಗಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಅಪಘಾತವೆಸಗಿದ ಕಾರು ಬಿಜೆಪಿ ಅಭ್ಯರ್ಥಿ ಕರಣ್ ಸಿಂಗ್ ಭೂಷಣ್ ಅವರ ಬೆಂಗಾವಲು ಪಡೆಗೆ ಸೇರಿದೆ. ಅಪಘಾತ ನಡೆದ ಸಂದರ್ಭದಲ್ಲಿ ಕರಣ್ ಭೂಷಣ್ ಸಿಂಗ್ ಅವರು ಕಾರಿನಲ್ಲಿದ್ದರೆ ಎಂಬ ಕುರಿತು ಸದ್ಯ ತನಿಖೆ ನಡೆಯುತ್ತಿದೆ. ಎಫ್‌ ಐ ಆರ್ ನಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ ಎಂದು ಹೇಳಲಾಗಿದೆ.

ಈ ಕುರಿತು ದಾಖಲಾಗಿರುವ ದೂರನ್ನು ಆಧರಿಸಿ ಕರ್ನಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಿಗೇ ಕ್ರಮ ಕೈಗೊಂಡಿರುವ ಪೊಲೀಸರು, ಕಾರು ಹಾಗೂ ಚಾಲಕನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಸದ್ಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News