ಅಸ್ಸಾಂನಲ್ಲಿ ತೀವ್ರಗೊಂಡ ನೆರೆ: 17 ಜಿಲ್ಲೆಗಳ 67,000 ಜನರು ಸಂತ್ರಸ್ತ
ಹೊಸದಿಲ್ಲಿ, ಜು. 14:ಅಸ್ಸಾಂನಲ್ಲಿ ಬ್ರಹ್ಮಪುತ್ರ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ನೆರೆ ಪರಿಸ್ಥಿತಿ ಇನ್ನಷ್ಟು ತೀವ್ರವಾಗಿದ್ದು, ಶುಕ್ರವಾರ 17 ಜಿಲ್ಲೆಗಳಲ್ಲಿ 67 ಸಾವಿರಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ನಿನ್ನೆ 41 ಸಾವಿರಕ್ಕೂ ಜನರು ಸಂತ್ರಸ್ತರಾಗಿದ್ದರು. ಇಂದು 67,689 ಜನರು ಸಂತ್ರಸ್ತರಾಗಿದ್ದಾರೆ. ಆದರೆ, ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ನಿನ್ನೆವರೆಗೆ ನೆರೆಗೆ 7 ಮಂದಿ ಸಾವನ್ನಪ್ಪಿದ್ದರು ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬುಲೆಟಿನ್ ತಿಳಿಸಿದೆ.
ನಿನ್ನೆ 10 ಜಿಲ್ಲೆಗಳು ತೊಂದರೆಗೀಡಾಗಿದ್ದವು. ಆದರೆ, ಇಂದು ಬಕ್ಸಾ, ಬಿಸ್ವನಾಥ್, ಬೊಂಗಾಯಿಗಾಂವ್, ಚಿರಂಗ್, ದೇಮಾಜಿ , ಧುಬ್ರಿ, ದಿಬ್ರುಗಢ, ಗೋಲಾಘಾಟ್, ಜೊರ್ಹಾತ್, ಕೊಕ್ರಝಾರ್, ಲಖಿಂಪುಯ್ಟಾ, ಮಜುಲಿಯು, ನಾಗಾಂವ್, ನಲ್ಬರಿ, ಶಿವಸಾಗರ್, ತಾಮಲ್ಪುರ ಹಾಗೂ ತೀನ್ಸುಕಿಯಾ ಸೇರಿ 17 ಜಿಲ್ಲೆಗಳು ತೊಂದರೆಗೀಡಾಗಿವೆ ಎಂದು ಅದು ತಿಳಿಸಿದೆ. ಧುಬ್ರಿ, ತೇಜ್ಪುರದಲ್ಲಿ ಬ್ರಹ್ಮಪುತ್ರ ಹಾಗೂ ಗೋಲಕ್ಗಂಜ್ನಲ್ಲಿ ಬೇಕಿ, ಬುರಿದಿಹಿಂಗ್ ಹಾಗೂ ಸಂಕೋಶ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಹೆಚ್ಚುವರಿ ನೀರನ್ನು ಮುಂಜಾನೆ ಬಿಡುಗಡೆ ಮಾಡಿದ ಬಳಿಕ ಭೂತಾನ್ ಗಡಿಯಲ್ಲಿರುವ ಪಶ್ಚಿಮ ಅಸ್ಸಾಂನ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಜಿಲ್ಲಾಡಳಿತ 78 ಪರಿಹಾರ ಶಿಬಿರ ಹಾಗೂ ವಿತರಣಾ ಕೇಂದ್ರಗಳನ್ನು ಆರಂಭಿಸಿದೆ. ಶಿಬಿರಗಳಲ್ಲಿ 4,531 ಜನರು ಆಶ್ರಯ ಪಡೆದುಕೊಂಡಿದ್ದಾರೆ.