"ಮುಸ್ಲಿಮರ ಮೇಲಿನ ನೇರ ದಾಳಿ" : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಜಂತರ್ ಮಂತರ್ನಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಭಟನೆ

ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರು ದಿಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದು, ವಕ್ಪ್ ತಿದ್ದುಪಡಿ ಮಸೂದೆಯು ಮುಸ್ಲಿಮರ ಮೇಲಿನ ನೇರ ದಾಳಿಯಾಗಿದೆ. ಮಸೂದೆಯು ವಕ್ಫ್ ಆಸ್ತಿಗಳನ್ನು ಕಬಳಿಸಲು ದಾರಿ ಮಾಡಿಕೊಡಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ) ಭಾರತದ ಮುಸ್ಲಿಂ ಧರ್ಮಗುರುಗಳ ಅತ್ಯುನ್ನತ ಸಂಸ್ಥೆಯಾಗಿದೆ. ಮುಸ್ಲಿಂ ಸಮುದಾಯವು ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಮುದಾಯದ ಮೇಲಿನ ನೇರ ದಾಳಿ ಎಂದು ಪರಿಗಣಿಸುತ್ತದೆ ಎಂದು ಎಐಎಂಪಿಎಲ್ಬಿ ಈ ಮೊದಲು ಹೇಳಿಕೆಯಲ್ಲಿ ತಿಳಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ, ವಕ್ಫ್ ಕಾಯ್ದೆ ಕುರಿತು ಜಂಟಿ ಸಂಸದೀಯ ಸಮಿತಿ ಶಿಫಾರಸು ಮಾಡಿದ ಬದಲಾವಣೆಗಳನ್ನು ಅನುಮೋದಿಸಿದ ಹಿನ್ನೆಲೆ ಪ್ರತಿಭಟನೆ ನಡೆದಿದೆ.
ಎಐಎಂಪಿಎಲ್ಬಿ ಪ್ರಧಾನ ಕಾರ್ಯದರ್ಶಿ ಫಝಲುರ್ ರಹೀಮ್ ಮುಜದ್ದಿದಿ ಮಾತನಾಡಿ, ಮಂಡಳಿಯು ಎಲ್ಲಾ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಸರಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ, ಸರಕಾರ ಈ ಬಗ್ಗೆ ಆಲಿಸುತ್ತಿಲ್ಲ. ಇದರಿಂದಾಗಿ ಪ್ರತಿಭಟನೆ ಮಾಡುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಸರಕಾರ ಈ ತಿದ್ದುಪಡಿಯನ್ನು ನಮ್ಮ ಮೇಲೆ ಹೇರಲು ಬಯಸುತ್ತಿದೆ. ಪರಿಸ್ಥಿತಿಯು ಹದಗೆಡುವುದನ್ನು ನಾವು ಬಯಸುವುದಿಲ್ಲ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸುತ್ತೇವೆ, ಆದರೆ ಈ ಪರಿಸ್ಥಿತಿಗಳಲ್ಲಿ ನಮ್ಮ ಕನಸು ನನಸಾಗುವುದಿಲ್ಲ. ಈ ತಿದ್ದುಪಡಿ ದೇಶದ ವಿರುದ್ಧವಾಗಿದೆ ಎಂದು ಹೇಳಿದರು.