ವಿವಾದಾತ್ಮಕ ನಿಲುವಿಗೆ ಅಂಟಿಕೊಂಡ ಕೆ. ಟಿ. ಜಲೀಲ್; ಬಿಜೆಪಿ ಮುಖಂಡ ಪಿ.ಸಿ.ಜಾರ್ಜ್ ಅನಿರೀಕ್ಷಿತ ಬೆಂಬಲ

PC: x.com/News18Kerala
ಮಲಪ್ಪುರಂ: ಕೇರಳದಲ್ಲಿ ಮಾದಕವಸ್ತು ಪ್ರಕರಣಗಳಲ್ಲಿ ಬಂಧಿತರಾದ ಬಹುತೇಕ ಮಂದಿ ಮದರಸಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದವರು ಎಂಬ ಹೇಳಿಕೆ ನೀಡುವ ಮೂಲಕ ಜನಸಾಮಾನ್ಯರಿಂದ ಆಕ್ರೋಶ ಎದುರಿಸುತ್ತಿರುವ ತವನೂರು ಶಾಸಕ ಕೆ. ಟಿ ಜಲೀಲ್ ಅವರ ನಿಲುವನ್ನು ವಿವಾದಾತ್ಮಕ ಬಿಜೆಪಿ ನಾಯಕ ಪಿ.ಸಿ.ಜಾರ್ಜ್ ಬೆಂಬಲಿಸಿದ್ದಾರೆ.
ಇಫ್ತಾರ್ ಕೂಟವೊಂದರಲ್ಲಿ ಮೊದಲ ಬಾರಿಗೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದ ಜಲೀಲ್ ತಮ್ಮ ಹೇಳಿಕೆಗೆ ಬದ್ಧ ಎಂದು ಸಮರ್ಥಿಸಿಕೊಂಡಿದ್ದಾರೆ. ಸಮುದಾಯದ ಲೋಪಗಳನ್ನು ಸರಿಪಡಿಸಿಕೊಳ್ಳುವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಶಾಸಕರ ಹೇಳಿಕೆಯನ್ನು ಸಮಸ್ತ ಕೇರಳ ಜಮ್-ಇಯ್ಯತುಲ್ ಉಲಾಮಾ ಹೆಸರಿನ ಧರ್ಮಗುರುಗಳ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಕಟುವಾಗಿ ಟೀಕಿಸಿವೆ.
ದ್ವೇಷಭಾಷಣ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪಿ.ಸಿ.ಜಾರ್ಜ್, ಶಾಸಕರಿಗೆ ಬೆಂಬಲ ಸೂಚಿಸಿ "ಈ ಸಮಸ್ಯೆ ಬಗ್ಗೆ ಬಹಳಷ್ಟು ಹಿಂದೆಯೇ ನಾನು ಬಹಿರಂಗವಾಗಿ ಮಾತನಾಡಿದ್ದೆ" ಎಂದು ಹೇಳಿದ್ದಾರೆ. "ಪಾಲಾ ಬಿಷಪ್ ಮಾರ್ ಜೋಸೆಫ್ ಕಲ್ಲರಂಗಾಟ್ ಅವರು ಈ ಮೊದಲೇ ಸಮಸ್ಯೆಯನ್ನು ಉಲೇಖಿಸಿದ್ದರು. ಈ ಬಗ್ಗೆ ನಾನು ಮಾತನಾಡುತ್ತಲೇ ಬಂದಿದ್ದೇನೆ. ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಎಸ್ಡಿಪಿಐ, ಐಯುಎಂಎಲ್ ಮತ್ತು ಇತರರು ನನ್ನ ಮೇಲೆ ಹಾಗೂ ಬಿಷಪ್ ಮೇಲೆ ದಾಖಲಿಸಿದಂತೆ ಜಲೀಲ್ ವಿರುದ್ಧವೂ ದೂರು ದಾಖಲಿಸಲಿ ಎಂದು ನಾನು ಸವಾಲು ಹಾಕುತ್ತಿದ್ದೇನೆ" ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಸಿಪಿಎಂ ಬೆಂಬಲಿತ ಪಕ್ಷೇತರ ಶಾಸಕರಾಗಿರುವ ಜಲೀಲ್, ಸಿಪಿಎಂ ಮೂವಾಟ್ಟುಪುಝ ಕ್ಷೇತ್ರ ಸಮಿತಿ ಸದಸ್ಯ ಎಂ.ಜೆ.ಫ್ರಾನ್ಸಿಸ್ ಅವರಿಂದಲೂ ಬೆಂಬಲ ಪಡೆದಿದ್ದು, ರಂಝಾನ್ ವೇಳೆ ಉಪವಾಸ ಮಾಡುವುದರಿಂದ ತಮ್ಮ ಎಲ್ಲ ಅಪರಾಧಗಳು ವಿಮೋಚನೆಯಾಗುತ್ತವೆ ಎಂದು ಕೆಲ ಮುಸ್ಲಿಮರು ನಂಬಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.