ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ಇಲ್ಲ: ರಾಹುಲ್ ಗಾಂಧಿ ಅಸಮಾಧಾನ
Photo : Sansad TV via PTI
ಹೊಸದಿಲ್ಲಿ: ಪ್ರಜಾಪ್ರಭುತ್ವದ ರಚನೆಯ ಪ್ರಕಾರ ಲೋಕಸಭೆಯ ಪ್ರತಿಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ, ‘‘ನವ ಭಾರತ’’ದಲ್ಲಿ ಅನುಮತಿ ನೀಡಲಾಗುತ್ತಿಲ್ಲ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
‘‘ಪ್ರಧಾನಿ ಅವರ ಹೇಳಿಕೆಯನ್ನು ನಾನು ಬೆಂಬಲಿಸಲು ಬಯಸಿದ್ದೆ. ಕುಂಭ ನಮ್ಮ ಸಂಪ್ರದಾಯ, ಇತಿಹಾಸ ಹಾಗೂ ಸಂಸ್ಕೃತಿ. ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ಅವರು ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು’’ ಎಂದು ರಾಹುಲ್ ಗಾಂಧಿ ಅವರು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ತಿಳಿಸಿದರು.
ನಾನು ಹೇಳಲು ಬಯಸುವ ಇನ್ನೊಂದು ವಿಷಯ ಏನೆಂದರೆ, ಕುಂಭ ಮೇಳಕ್ಕೆ ಹೋದ ಯುವಕರಿಗೆ ಉದ್ಯೋಗ ನೀಡಬೇಕಾದ ಅಗತ್ಯತೆ ಇದೆ. ಪ್ರಧಾನಿ ಅವರು ಉದ್ಯೋಗದ ಬಗ್ಗೆ ಮಾತನಾಡಬೇಕಿತ್ತು ಎಂದು ಅವರು ಹೇಳಿದರು.
ಕಾಂಗ್ರೆಸ್ ನ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, ಸದನದಲ್ಲಿ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಜನವರಿ 13ರಿಂದ ಫೆಬ್ರವರಿ 23ರ ವರೆಗೆ ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ಆಯೋಜಿಸಲಾಗಿದ್ದ ಮಹಾಕುಂಭ ಮೇಳದ ಯಶಸ್ವಿ ಕುರಿತ ಮೋದಿ ಅವರ ಹೇಳಿಕೆಗೆ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಮಂಗಳವಾರ ಲೋಕಸಭೆಯನ್ನು 1 ಗಂಟೆ ವರೆಗೆ ಸಂಕ್ಷಿಪ್ತವಾಗಿ ಮುಂದೂಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದ ಯಶಸ್ವಿ ಆಯೋಜನೆಯನ್ನು ಪ್ರಮುಖ ಮೈಲುಗಲ್ಲು ಎಂದು ಬಣ್ಣಿಸಿದರು. ಇಂತಹ ದೊಡ್ಡ ಸಭೆಯನ್ನು ಆಯೋಜಿಸುವ ಭಾರತದ ಸಾಮರ್ಥ್ಯದ ಕುರಿತು ಪ್ರಶ್ನಿಸುವವರಿಗೆ ಕುಂಭಮೇಳ ಸೂಕ್ತ ಉತ್ತರ ನೀಡಿದೆ ಎಂದು ಹೇಳಿದ್ದರು.