ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಸಿಆರ್‌ಝಡ್ ನಿಯಮ: ಪಿಣರಾಯಿ

Update: 2016-08-10 18:28 GMT

 ತಿರುವನಂತಪುರ,ಆ.10: ಕೇಂದ್ರ ಸರಕಾರವು ಹೊರಡಿಸಿರುವ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ಅಧಿಸೂಚನೆಯಲ್ಲಿನ ನಿರ್ಬಂಧಗಳಿಂದಾಗಿ ಜನರು, ವಿಶೇಷವಾಗಿ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ವಾಸವಾಗಿರುವ ಮೀನುಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಇಲ್ಲಿ ತಿಳಿಸಿದರು.

‘ಕರಾವಳಿ ರಕ್ಷಣೆ ಮತ್ತು ನಿರ್ವಹಣೆ, ಕೇರಳ’ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಗ್ರ ಕರಾವಳಿ ವಲಯ ನಿರ್ವಹಣೆ(ಐಸಿಝಡ್‌ಎಂ) ಯೋಜನೆಯನ್ನು ರಾಜ್ಯವು ರೂಪಿಸಲಿದೆ ಮತ್ತು ಅದರ ಅನುಷ್ಠಾನಕ್ಕಾಗಿ ಕೇಂದ್ರದ ಅನುಮತಿಯನ್ನು ಕೋರಲಿದೆ ಎಂದರು.
ಕೇಂದ್ರವು 2011ರಲ್ಲಿ ಸಿಆರ್‌ಝಡ್ ಅಧಿಸೂಚನೆಯನ್ನು ಹೊರಡಿಸಿದ ಸಂದರ್ಭ ಒಂದು ವರ್ಷದೊಳಗೆ ಇಂತಹ ಯೋಜನೆಯನ್ನು ರೂಪಿಸುವಂತೆ ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆಯನ್ನು ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿತ್ತು, ಆದರೆ ಕೇರಳವು ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿರಲಿಲ್ಲ ಎಂದು ಅವರು ತಿಳಿಸಿದರು.
ಸಿಆರ್‌ಝಡ್‌ನಡಿಯ ನಿರ್ಬಂಧಗಳಿಂದಾಗಿ ಕರಾವಳಿ ಪ್ರದೇಶಗಳಲ್ಲಿಯ ಜನರಿಗೆ ಹೊಸಮನೆಗಳ ನಿರ್ಮಾಣ ಸಾಧ್ಯವಾಗುತ್ತಿಲ್ಲ ಮತ್ತು ಹಾಲಿ ವಾಸವಿರುವ ಮನೆಗಳ ರಿಪೇರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿಲ್ಲ. ರಾಜ್ಯದ ಐಸಿಝಡ್‌ಎಂ ಯೋಜನೆಗೆ ಅನುಮತಿ ಪಡೆದುಕೊಳ್ಳುವ ಮೂಲಕ ಮಾತ್ರವೇ ಕರಾವಳಿ ಪ್ರದೇಶಗಳ ಜನರ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಪಿಣರಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News