ಬೆಂಗಳೂರು | ಏರ್‌ಫೈರ್ ಮಾಡಿದ ಪ್ರಕರಣ : ರೌಡಿಶೀಟರ್ ಸಹಿತ 6 ಮಂದಿ ಬಂಧನ

Update: 2024-10-05 12:35 GMT

ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಪಿಸ್ತೂಲ್‍ನಿಂದ ಏರ್‌ಫೈರ್ ಮಾಡಿದ್ದ ಪ್ರಕರಣ ಸಂಬಂಧ ರೌಡಿಶೀಟರ್ ಸಹಿತ 6 ಜನ ಆರೋಪಿಗಳನ್ನು ಇಲ್ಲಿನ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ರೌಡಿಶೀಟರ್ ಸಿರಾಜುದ್ದೀನ್ ಯಾನೆ ಬುಲ್ಡು, ಇಲ್ಯಾಸ್ ಸೇರಿದಂತೆ 6 ಜನರನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ರೌಡಿಶೀಟರ್ ಸಿರಾಜುದ್ದೀನ್ ಹಾಗೂ ಫ್ಲೈವುಡ್ ಅಂಗಡಿ ಮಾಲಕ ಇಲ್ಯಾಸ್ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಚಿಕ್ಕ ಗಲಾಟೆಯಾಗಿತ್ತು. ಸೆ.20ರಂದು ರಾತ್ರಿ ಪಿಸ್ತೂಲ್ ಹಿಡಿದು ಬಂದಿದ್ದ ಸಿರಾಜುದ್ದೀನ್, ಇಲ್ಯಾಸ್‌ನ ಎದೆಗೆ ಪಿಸ್ತೂಲ್ ಇಟ್ಟು ಬೆದರಿಸಿದ್ದ. ಅಷ್ಟರಲ್ಲಿ ಅಕ್ಕಪಕ್ಕದ ಅಂಗಡಿಯಲ್ಲಿದ್ದವರು ಜಮಾಯಿಸಿದ್ದರು. ಈ ವೇಳೆ ಯಾರು ಅಡ್ಡ ಬರಬಾರದೆಂದು ಬೆದರಿಸಿದ್ದ ಸಿರಾಜುದ್ದೀನ್ ಒಂದು ಸುತ್ತು ಏರ್‌ಫೈರ್ ಮಾಡಿದ್ದ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬಳಿಕ ಸ್ಥಳದಿಂದ ದ್ವಿಚಕ್ರ ವಾಹನದ ಮೂಲಕ ಪರಾರಿಯಾಗಲು ಮುಂದಾದಾಗ ಇಲ್ಯಾಸ್‌ ಕಡೆಯವರು ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಮೊಹಮ್ಮದ್ ಖುರ್ರಂ ಪಾಷಾ ಎಂಬಾತನನ್ನು ಹಿಡಿದುಕೊಂಡು ಥಳಿಸಿದ್ದರು. ಬಳಿಕ ಘಟನೆ ಸಂಬಂಧ ಸ್ಥಳೀಯರು ಸುದ್ದಗುಂಟೆಪಾಳ್ಯ ಠಾಣೆಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸಿರಾಜುದ್ದೀನ್ ಹಾಗೂ ಇಲಿಯಾಸ್ ಸೇರಿ 6 ಜನರನ್ನು ಬಂಧಿಸಲಾಗಿದೆ. ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News