ಬೆಂಗಳೂರು| ನಿಷೇಧಿತ ಮಾವೋವಾದಿ ಸಂಘಟನೆಗೆ ಕೆಲಸ ಮಾಡುತ್ತಿದ್ದ ಆರೋಪ: ಗೆಳತಿ ನೋಡಲು ಬಂದ ವ್ಯಕ್ತಿಯ ಬಂಧನ

Update: 2024-09-06 15:56 GMT

ಬೆಂಗಳೂರು: ನಿಷೇಧಿತ ಮಾವೋವಾದಿ ಸಂಘಟನೆಯೊಂದರ ಬೆಂಬಲಿಗನಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬೆಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ಅನಿರುದ್ಧ ರಾಜನ್ ಬಂಧಿತ ಆರೋಪಿ. ನಗರದ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತೆಯನ್ನು ನೋಡಲು ಬರುವ ಖಚಿತ ಮಾಹಿತಿಯೊಂದಿಗೆ ಸಿಸಿಬಿ ಭಯೋತ್ಪಾದಕ ನಿಗ್ರಹದಳದ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ.

ಮಾವೋವಾದಿ ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿದ್ದ ಅನಿರುದ್ಧ ನಿಷೇಧಿತ ಬರಹಗಳನ್ನು ಪ್ರಚುರಪಡಿಸುತ್ತಿದ್ದ. ಇದುವರೆಗೂ ಪೊಲೀಸರಿಗೆ ಸಿಕ್ಕಿರಲಿಲ್ಲ. ಗೆಳತಿಯನ್ನು ನೋಡಲು ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದ ಅನಿರುದ್ಧ ನಿಷೇಧಿತ ಸಂಘಟನೆ ಪರ ಹಣ ಸಂಗ್ರಹ ಹಾಗೂ ಗುಪ್ತಸಭೆ ನಡೆಸುತ್ತಿದ್ದ. ಗುರುವಾರ ಬೆಳಗ್ಗೆ ಮೆಜೆಸ್ಟಿಕ್‍ನಿಂದ ಚೆನ್ನೈಗೆ ಹೋಗಲು ಬಸ್ ನಿಲ್ದಾಣ ಬಳಿ ಕಾಯುತ್ತಿದ್ದಾಗ ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದ ಆರೋಪಿಯಿಂದ ಸದ್ಯ 2 ಬ್ಯಾಗ್‍ಗಳು, ಪೆನ್‍ಡ್ರೈವ್‍ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದ್ದು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News