ಬೆಂಗಳೂರು | ಕೋರ್ಟ್ ಸಮೀಪ‌ ವಕೀಲೆಗೆ ಚಾಕು ಇರಿತ : ಆರೋಪಿ ವಶಕ್ಕೆ

Update: 2024-07-23 13:45 GMT
ಸಾಂದರ್ಭಿಕ ಚಿತ್ರ( PC : Meta AI)

ಬೆಂಗಳೂರು: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮೀಪ ವಕೀಲೆಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದು, ಆರೋಪಿಯನ್ನು ಇಲ್ಲಿನ ಹಲಸೂರು ಗೇಟ್ ಠಾಣಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ವಿಮಲಾ(38) ಎಂಬ ವಕೀಲೆಗೆ ಜಯರಾಮರೆಡ್ಡಿ(65) ಎಂಬಾತ ಚಾಕು ಇರಿದಿದ್ದಾನೆ ಎಂದು ಗುರುತಿಸಲಾಗಿದೆ. ಇರಿತಕ್ಕೊಳಗಾದ ವಿಮಲಾ ಹಾಗೂ ಆರೋಪಿ ಜಯರಾಮರೆಡ್ಡಿ ಇಬ್ಬರೂ 9 ವರ್ಷಗಳಿಂದ ಸ್ನೇಹಿತರು. ಜಮೀನೊಂದರ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ.

ಹಣವನ್ನೂ ಸಹ ಪಡೆದು ವಂಚಿಸಿದ್ದ ಆರೋಪದಡಿ ಈ ಹಿಂದೆ ಜಯರಾಮರೆಡ್ಡಿ ವಿರುದ್ಧ ಶೇಷಾದ್ರಿಪುರಂ ಠಾಣೆಗೆ ವಿಮಲಾ ದೂರು ನೀಡಿದ್ದರು. ಮಂಗಳವಾರ ಈ ಪ್ರಕರಣದ ವಿಚಾರಣೆ ಇದ್ದುದರಿಂದ ಇಬ್ಬರೂ ಸಹ ಕೋರ್ಟ್ ಬಳಿ ಬಂದಿದ್ದರು. ಈ ಸಂದರ್ಭದಲ್ಲಿ ವಿಮಲಾಗೆ ಆರೋಪಿ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ.

ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ವಿಮಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಹಲಸೂರು ಗೇಟ್ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News