ಬೆಂಗಳೂರು | ಬಾಕಿ ಸಂಬಳ ಕೇಳಿದ ಕೆಲಸಗಾರನನ್ನು ನಗ್ನಗೊಳಿಸಿ ಹಲ್ಲೆಗೈದ ಅಂಗಡಿ ಮಾಲಕ

Update: 2024-08-14 07:02 GMT

ಬೆಂಗಳೂರು, ಆ.14: ಹಾಸಿಗೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕ ಬಾಕಿ ಸಂಬಳ ಕೇಳಿದ್ದಕ್ಕೆ ಅಂಗಡಿ ಮಾಲಕ ಕೂಡಿಹಾಕಿ ನಗ್ನಗೊಳಿಸಿ ಹಲ್ಲೆಗೈದಿರುವ ಅಮಾನವೀಯ ಘಟನೆ ಸುಬ್ರಮಣ್ಯಪುರದ ಉತ್ತರಹಳ್ಳಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಹಲ್ಲೆಯ ವೀಡಿಯೊ ವೈರಲ್ ಆಧರಿಸಿ ಸುಬ್ರಹ್ಮಣ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶ ಮೂಲದ ಶರೀಫ್ ಹಲ್ಲೆಗೊಳಗಾದ ಯುವಕ. ಉತ್ತರಹಳ್ಳಿಯ ಹಾಸಿಗೆ ವ್ಯಾಪಾರಿ ಶೇಕ್ಷವಾಲ ಹಲ್ಲೆ ಆರೋಪಿ ಎಂದು ತಿಳಿದುಬಂದಿದೆ.

ಶೇಕ್ಷವಾಲನಿಗೆ ಸಂಬಂಧಿಯಾಗಿರುವ ಶರೀಫ್ ಹಾಸಿಗೆ ವ್ಯಾಪಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಶೇಕ್ಷವಾಲನಿಗೆ ಅಂಗಡಿಯ ಕೆಲಸ ತೊರೆದು ಬೇರೊಂದು ಅಂಗಡಿಗೆ ಸೇರಿದ್ದನು. ಈ ನಡುವೆ ಬಾಕಿಯಿದ್ದ ಸಂಬಳ ನೀಡುವುದಾಗಿ ಶರೀಫ್ ರನ್ನು ಶೇಕ್ಷವಾಲ ತನ್ನ ಅಂಗಡಿಗೆ ಕರೆಸಿಕೊಂಡಿದ್ದ. ಅದರಂತೆ ಬಂದ ಶರೀಫ್ ನನ್ನು ಅಂಗಡಿಯೊಳಗೆ ಕೂಡಿ ಹಾಕಿ ನಗ್ನಗೊಳಿಸಿ ಬೆತ್ತದಿಂದ ಥಳಿಸಿ ದರ್ಪ ಮೆರೆದಿದ್ದಾನೆ. ಇದನ್ನು ವೀಡಿಯೊ ಕೂಡಾ ಮಾಡಿದ್ದಾನೆನ್ನಲಾಗಿದೆ.

ಹಲ್ಲೆಯಿಂದ ಹೆದರಿದ ಪೊಲೀಸ್ ದೂರೇನೂ ನೀಡದೆ ಶರೀಫ್ ತನ್ನೂರಿಗೆ ತೆರಳಿದ್ದನು. ಈ ನಡುವೆ ಶೇಕ್ಷವಾಲನ ಅಮಾನವೀಯ ಕೃತ್ಯದ ವೀಡಿಯೊ ವೈರಲ್ ಆಗಿತ್ತು. ಇದೀಗ ವೀಡಿಯೊವನ್ನು ಆಧರಿಸಿ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News