ಬೆಂಗಳೂರು | ‘ಬೆಳಗ್ಗಿನ ಉಪಹಾರ ತಯಾರಿಸಿಲ್ಲ’ ಎನ್ನುವ ಕಾರಣಕ್ಕೆ ತಾಯಿಯನ್ನೆ ಹತ್ಯೆಗೈದ ಮಗ !

Update: 2024-02-02 13:44 GMT

ಬೆಂಗಳೂರು: ‘ಬೆಳಗ್ಗೆ ಉಪಹಾರ ಮಾಡಿಲ್ಲ’ ಎನ್ನುವ ಕಾರಣಕ್ಕೆ ತಾಯಿಯ ತಲೆಗೆ ರಾಡ್‍ನಿಂದ ಹೊಡೆದು ಹತ್ಯೆಗೈದ ಮಗ ಬಳಿಕ ಕೆ.ಆರ್.ಪುರ ಪೊಲೀಸರಿಗೆ ಶರಣಾದ ಘಟನೆ ಶುಕ್ರವಾರ ವರದಿಯಾಗಿದೆ.

ಕೆ.ಆರ್.ಪುರದ ಜಸ್ಟೀಸ್ ಭೀಮಯ್ಯ ಲೇಔಟ್‍ನಲ್ಲಿ ವಾಸಿಸುವ ನೇತ್ರಾವತಿ(40) ಕೊಲೆಯಾದ ತಾಯಿ ಎಂದು ಗುರುತಿಸಲಾಗಿದೆ. 17 ವರ್ಷದ ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಮುಳಬಾಗಿಲಿನಲ್ಲಿ ಡಿಪೆಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಆರೋಪಿ ಮಗ ಫೆ.1ರಂದು ಮನೆಗೆ ಬಂದಿದ್ದಾನೆ. ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡು ಊಟ ಮಾಡದೇ ಮಲಗಿದ್ದ. ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೋಗಲು ಸಿದ್ಧನಾಗಿದ್ದಾನೆ. ಫೆ.2ರ ಬೆಳಗ್ಗೆ 7ಗಂಟೆಯಾದರೂ ತಿಂಡಿ ಮಾಡದೆ ತಾಯಿ ನಿದ್ರಿಸುತ್ತಿರುವುದನ್ನು ಗಮನಿಸಿ ಕೋಪಗೊಂಡಿದ್ದಾನೆ. ಯಾಕೆ ತಿಂಡಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾನೆ. ಕೋಪದಲ್ಲಿದ್ದ ನೇತ್ರಾವತಿ, ‘ನೀನು ನನ್ನ ಮಗನೇ ಅಲ್ಲ’ ಅಂದಿದ್ದಾರೆ. ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಮಗ ಮನೆಯಲ್ಲೇ ಇದ್ದ ಕಬ್ಬಿಣದ ರಾಡ್‍ನಿಂದ ನೇತ್ರಾವತಿ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಆತಂಕಗೊಂಡ ಮಗ ದಿಕ್ಕು ತೋಚದೆ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

30 ವರ್ಷಗಳಿಂದ ನೇತ್ರಾವತಿ ಕುಟುಂಬ ಕೆ.ಆರ್.ಪುರದಲ್ಲಿ ವಾಸವಾಗಿತ್ತು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಕೆಲಸಕ್ಕೆ ಹೋಗುತ್ತಿದ್ದರು. ಮೂಲತಃ ಮುಳಬಾಗಿಲು ಆಗಿದ್ದರಿಂದ ಅಲ್ಲಿನ ಕಾಲೇಜೊಂದರಲ್ಲಿ ಮಗನನ್ನು ಉನ್ನತ ವ್ಯಾಸಂಗಕ್ಕೆ ಸೇರಿಸಿದ್ದರು. ಸದ್ಯ ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News