ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿದ ಬಿಬಿಎಂಪಿ

Update: 2023-11-18 17:38 GMT

ಬೆಂಗಳೂರು: ಬಿಬಿಎಂಪಿಯು ಪೂರ್ವ, ದಕ್ಷಿಣ ಹಾಗೂ ಪಶ್ಚಿಮ ವಲಯ ವ್ಯಾಪ್ತಿಯಲ್ಲಿಯ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶನಿವಾರ ಮುಂದುವರೆಸಿತು.

ಪೂರ್ವ ವಲಯದ ಇಂದಿರಾನಗರ 100 ಅಡಿ ರಸ್ತೆ ಮತ್ತು ಸಿ.ಎಂ.ಹೆಚ್ ರಸ್ತೆಯಲ್ಲಿ ಯೋಜನಾ ವಿಭಾಗದಿಂದ ಕೈಗೊಂಡಿರುವ ವೈಟ್ ಟಾಪಿಂಗ್ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಿ, ಇನ್ನು ಮುಂದೆ ಒತ್ತುವರಿ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಯಿತು.

ಕೆಲವೆಡೆ ಹೊಟೇಲ್, ಕಾರ್ ಶೋರೂಮ್ ಮುಂಭಾಗ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಕಾಂಕ್ರಿಂಟ್ ರ್ಯಾಂಪ್ ಅನ್ನು ನಿರ್ಮಿಸಿದ್ದು, ಅದನ್ನು ಸ್ಥಳದಲ್ಲೇ ಜೆಸಿಬಿಯ ಮೂಲಕ ತೆರವುಗೊಳಿಸಲಾಯಿತು. ಅದಲ್ಲದೆ ಆಸ್ಪತ್ರೆಯ ಮುಂಭಾಗ ಸ್ಟೀಲ್ ರ್ಯಾಂಪ್ ಅಳವಡಿಸಿದ್ದು, ಅದನ್ನು ಅವಶ್ಯಕತೆಯಿರುವಾಗ ಮಾತ್ರ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಕಲ್ಟ್ ಫಿಟ್ ಬಳಿ ಶಾಶ್ವತ ನಾಮಫಲಕ ಅಳವಡಿಸಿದ್ದು, ಅದನ್ನು ಸ್ಥಳದಲ್ಲೇ ತೆರವುಗೊಳಸಲಾಗಿದೆ. ಬಹುತೇಕ ಕಡೆ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದು, ಪಾದಚಾರಿ ಮಾರ್ಗಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ನೋಡಿಕೊಳ್ಳಲು ಮಳಿಗೆಗಳ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಪಾದಚಾರಿ ಮಾರ್ಗದಲ್ಲಿ ಗಣೇಶ ಮೂರ್ತಿಗಳನ್ನಿಟ್ಟಿದ್ದು, ಅವುಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಯಿತು.

ಬಸವನಗುಡಿಯ ವಿದ್ಯಾಪೀಠ ವಾರ್ಡ್ ಸಿ.ಟಿ ಬೆಡ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ತಳ್ಳುವ ಗಾಡಿಗಳನ್ನು ಬೇರೆ ಕಡೆ ತೆರಳಿ ಮಾರಾಟ ಮಾಡಿಕೊಳ್ಳಲು ಸೂಚಿಸಲಾಗಿದೆ. 

ಗಾಂಧಿನಗರದ ಅವೆನ್ಯೂ ರಸ್ತೆ ಮೈಸೂರು ಬ್ಯಾಂಕ್ ಬಳಿಯ ಕೃಷ್ಣ ಬಿಲ್ಡಿಂಗ್ ಮುಂಭಾಗ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಪುಸ್ತಕಗಳು ಸೇರಿದಂತೆ ಇನ್ನಿತರ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸಲಾಯಿತು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಳ್ಳದಂತೆ ಸೂಚನೆ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News