ರೈತರ ಹಿತ ಕಾಯುವಲ್ಲಿ ಬೆಲೆ ಆಯೋಗದ ಪಾತ್ರ ಮುಖ್ಯ : ಎನ್.ಚಲುವರಾಯಸ್ವಾಮಿ

Update: 2024-06-20 13:18 GMT

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವಲ್ಲಿ ಕೇಂದ್ರ ಕೃಷಿ ಬೆಲೆ ಆಯೋಗದ ಪಾತ್ರ ಬಹಳ ಮಹತ್ವವಾದದ್ದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಕೇಂದ್ರ ಸರಕಾರದ ಕೃಷಿ ವೆಚ್ಚ ಹಾಗೂ ಬೆಲೆಗಳ ಆಯೋಗ ಮತ್ತು ರಾಜ್ಯ ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ನಗರದ ಕೃಷಿ ಆಯುಕ್ತಾಲಯದ ಸಂಗಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿಂಗಾರು ಹಂಗಾಮಿನ ಬೆಳೆಗಳ ಬೆಲೆ ನೀತಿ: 2025-26ನೇ ಸಾಲಿನ ಮಾರಾಟ ಅವಧಿ ಕುರಿತು ದಕ್ಷಿಣ ರಾಜ್ಯಗಳ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಯಾಗಬೇಕು. ಡಾ.ಸ್ವಾಮಿನಾಥನ್ ಅವರ ವರದಿ ಜಾರಿಯಾಗಬೇಕು. ಜಾಗತಿಕ ಕೃಷಿಯಲ್ಲಿ ಭಾರತ ಮತ್ತು ಕರ್ನಾಟಕ ರಾಜ್ಯದ ಪಾತ್ರ ಮಹತ್ವವಾದದ್ದು. ಅನೇಕ ಏಳು ಬೀಳುಗಳ ನಡುವೆಯೂ ನಾವು ಸ್ಥಿರತೆ ಕಂಡುಕೊಂಡಿದ್ದೇವೆ ಎಂದು ಅವರು ಹೇಳಿದರು.

ಕಳೆದ ಎರಡು ದಶಕಗಳಲ್ಲಿ ಬಹುತೇಕ ವರ್ಷ ಬರ, ಕೆಲ ವರ್ಷ ಅತಿವೃಷ್ಟಿ ನಮ್ಮನ್ನು ಕಾಡಿದೆ. ಇಂತಹ ಸಂದರ್ಭಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳೆರೆಡೂ ರೈತರ ಸಂಕಷ್ಟಕ್ಕೆ ಇನ್ನಷ್ಟು ಹೆಚ್ಚು ಸ್ಪಂದಿಸಿ ನೆರವಾಗಬೇಕಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ರಾಜ್ಯ ಸರಕಾರ ರೈತರ ಹಿತ ಕಾಯಲು ಅನೇಕ ಪ್ರಮುಖ ಯೋಜನೆ ರೂಪಿಸಿ ಜಾರಿಗೊಳಿಸಿದೆ. ಇದನ್ನು ತಲುಪಿಸುವಲ್ಲಿ ಅಧಿಕಾರಿಗಳ ಜವಾಬ್ದಾರಿ ದೊಡ್ಡದು ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕೇಂದ್ರ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಅಧ್ಯಕ್ಷ ವಿಜಯ್ ಪಾಲ್ ಶರ್ಮ ಕೃಷಿ ಸವಾಲುಗಳು, ಬೆಂಬಲ ಬೆಲೆ ನಿಗಧಿ ಮಾನದಂಡಗಳು, ಆಗಬೇಕಿರುವ ಸುಧಾರಣೆಗಳು, ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾತ್ರದ ಬಗ್ಗೆ ವಿವರಿಸಿದರು.

ಸುಸ್ಥಿರ ಕೃಷಿಗೆ ಬೆಲೆ ಸ್ಥಿರೀಕರಣದ ಜೊತೆಗೆ ಉತ್ಪಾದನೆ, ಮಾರಾಟ ವೆಚ್ಚದಲ್ಲಿ ಕಡಿತ ಮುಖ್ಯವಾಗಿದೆ. ಇದಕ್ಕೆ ತಂತ್ರಜ್ಞಾನ, ಯಾಂತ್ರೀಕರಣಗಳ ವರ್ಗಾವಣೆ ಜೊತೆಗೆ ವಿಶ್ವ ವಿದ್ಯಾನಿಲಯಗಳ ಸಂಶೋಧನೆಗಳು ಸುಲಭವಾಗಿ ಕೃಷಿಕರ ನೆಲ ತಲುಪಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಕೇಂದ್ರ ಕೃಷಿ ಬೆಲೆ ಆಯೋಗದ ಸದಸ್ಯರಾದ ಡಾ.ನವೀನ್ ಪ್ರಕಾಶ್ ಸಿಂಗ್, ರತನ್ ಲಾಲ್ ಡಗ, ಅನುಪಮ್ ಮಿತ್ರ, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ.ಪುತ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News