ಸುಳ್ಳು ದೂರು ದಾಖಲಿಸುವುದು ದೊಡ್ಡ ಪಾಪ: ಪೋಕ್ಸೊ ಕಾಯ್ದೆ ದುರ್ಬಳಕೆ ಕುರಿತು ಪೋಷಕರಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್

Update: 2024-02-08 14:08 GMT

ಬೆಂಗಳೂರು : ಪೋಷಕರ ದುರುದ್ದೇಶಪೂರಿತ ನಡುವಳಿಕೆಗಳನ್ನು ಮಕ್ಕಳ ಮೇಲೆ ಪ್ರಯೋಗ ಮಾಡುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತ ಪಡಿಸಿರುವ ಹೈಕೋರ್ಟ್, ಮಗಳ ಮೇಲೆ ಮಲತಂದೆಯಿಂದ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದಾಗಿ ದಾಖಲಿಸಿದ್ದ ಪ್ರಕರಣ ಮತ್ತದರ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.

ಮಹಿಳೆಯ ಪತಿಯ ವಿರುದ್ಧ ಮೊದಲ ಪತಿ ದಾಖಲಿಸಿದ್ದ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಸಂಸಾದರಲ್ಲಿ ಉಂಟಾಗುವ ಗೊಂದಲದಿಂದ ಪೋಷಕರು ತಮ್ಮ ಸ್ವಂತ ಮಕ್ಕಳ ಮೇಳೆ ಲೈಂಗಿಕ ದೌರ್ಜನ್ಯದ ನಡೆದಿದೆ ಎಂದು ಆರೋಪಿಸಿ ಬಳಿಕ ಮರೆತು ಬಿಡುತ್ತಾರೆ. ಆದರೆ, ಈ ರೀತಿಯ ಪ್ರಕರಣಗಳು ಮಗುವಿನ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ಆರೋಪ ಮಾಡುವುದಕ್ಕೂ ಮುನ್ನ ಪೋಷಕರು ಆಲೋಚನೆ ಮತ್ತು ಆತ್ಮಾವಲೋಕನಕ್ಕೆ ಒಳಗಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಈ ರೀತಿಯ ಆರೋಪಗಳು ನಿಜವೇ ಆಗಿದ್ದರೆ, ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಮಗವಿನ್ನು ವಶಕ್ಕೆ ನೀಡದ ಉದ್ದೇಶಕ್ಕಾಗಿ ಸುಳ್ಳು ದೂರು ದಾಖಲಿಸುವಂತಹ ಬೆಳವಣಿಗೆಗಳಿಗಿಂತಲೂ ದೊಡ್ಡ ಪಾಪ ಮತ್ತೊಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪತ್ನಿ ತನ್ನನ್ನು ತೊರೆದು ಅರ್ಜಿದಾರರನ್ನು ಮದುವೆಯಾದ ತಾಯಿಯೊಂದಿಗೆ ದ್ವೇಷ ಈಡೇರಿಸಿಕೊಳ್ಳಲು ಕಾನೂನುನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಮಗುವನ್ನು ದೌರ್ಜನ್ಯದಿಂದ ರಕ್ಷಿಸಲು ಉದ್ದೇಶಿಸಿರುವ ಪೋಕ್ಸೊ ಕಾಯ್ದೆಯನ್ನೂ ದುರ್ಬಳಕೆ ಮಾಡಿಕೊಂಡಿರುವುದು ದುರದೃಷ್ಟಕರ ಸಂಗತಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು ?

ಪ್ರಕರಣದಲ್ಲಿ ಬಾಲಕಿಯ ತಾಯಿ ಮತ್ತು ಜೈವಿಕ ತಂದೆ 2017 ರಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ, ಬಾಲಕಿಯ ಕಸ್ಟಡಿ ತಾಯಿಗೆ ನೀಡಲಾಗಿತ್ತು. ತಂದೆಗೆ ಮಗುವನ್ನು ಭೇಟಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಆದರೂ, ಒಪ್ಪಂದದ ಪ್ರಕಾರ, ಪೋಷಕರಲ್ಲಿ ಯಾರಾದರೂ ಒಬ್ಬರು ದೂರದೂರುಗಳಿಗೆ ಪ್ರಯಾಣಿಸುವಾಗ ಬಾಲಕಿ ಪ್ರಯಾಣಿಸದೆ ಮನೆಯಲ್ಲಿರುವ ಪೋಷಕರೊಂದಿಗೆ ಉಳಿಯಬೇಕಾಗಿತ್ತು.

ತಾಯಿ ವಿದ್ಯಾಬ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಗಳನ್ನು ಮೂರನೇ ಪತಿ(ಅರ್ಜಿದಾರರ ಬಳಿ ಬಿಟ್ಟಿದ್ದರು). ಇದರಿಂದ ಕೊಪಗೊಂಡಿದ್ದ ಮೊದಲ ಪತಿ ತನ್ನ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆಸಲಾಗಿದೆ ಎಂದು ಆರೋಪಿಸಿ ಮೂರನೇ ಪತಿ ಹಾಗೂ ಪತ್ನಿಯ ಸಂಬಂಧಿಯ ವಿರುದ್ಧ ದೂರು ನೀಡಿದ್ದು, ದೂರಿನ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.

ಇದನ್ನು ಪ್ರಶ್ನಿಸಿದ್ದ ಮೂರನೇ ಪತಿ, ತನ್ನ ವಿರುದ್ಧ ಐಪಿಸಿಯ ವಿವಿಧ ಕಲಂಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ದಾಖಲಾದ ಪ್ರಕರಣ ವಿಚಾರಣೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News