ಬಿಜೆಪಿಗೆ ರೈತಪರ ಕಾಳಜಿ ಇದ್ದರೆ ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿಸಿ: ಎಂ.ಲಕ್ಷ್ಮಣ್

Update: 2023-12-26 17:47 GMT

ಬೆಂಗಳೂರು: ಬಿಜೆಪಿಯವರಿಗೆ ರೈತಪರ ಕಾಳಜಿ ಇದ್ದರೆ ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವ ಬಗ್ಗೆ ಮಾತನಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 45 ಸಾವಿರ ಕೋಟಿ ರೂ. ಪರಿಹಾರ ಬಾಕಿ ಇದೆ. ಅದನ್ನು ಕೊಡಿಸುವ ಬಗ್ಗೆ ಬಿಜೆಪಿಯ ಯಾವೊಬ್ಬ ಸಂಸದರೂ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು ಧ್ವನಿ ಎತ್ತುತ್ತಿಲ್ಲ. ಪ್ರಹ್ಲಾದ್ ಜೋಷಿ ಅವರು ತಮ್ಮ ಭಾಗದ ಸಮಸ್ಯೆ ಬಗ್ಗೆ ಮೋದಿ ಅವರ ಜತೆ ಮಾತನಾಡಿದ್ದಾರೆ. ಶೋಭ ಕರಂದ್ಲಾಜೆ ಅವರು ಚಿಕ್ಕಮಗಳೂರು ಸಂಸದೆಯಾಗಿ ಎಷ್ಟು ಬಾರಿ ಆ ಜಿಲ್ಲೆಗೆ ಭೇಟಿ ನೀಡಿದ್ದಾರೆ, ಎಷ್ಟು ಅನುದಾನ ತಂದಿದ್ದಾರೆ ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

ಚುನಾವಣೆ ಸಮೀಪಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳಿಂದ ಜನರ ದಿಕ್ಕು ತಪ್ಪಿಸಲು ಸಣ್ಣ ವಿಚಾರವನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡಿತ್ತಿದ್ದಾರೆ. ರೈತರ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ ಇದ್ದರೆ ಬರಗಾಲದಲ್ಲಿ ಇದುವರೆಗೂ 5 ಪೈಸೆ ಹಣ ಬಿಡುಗಡೆ ಮಾಡಿಲ್ಲ ಏಕೆ?, ಬಿಜೆಪಿಯವರು ರೈತ ವಿರೋಧಿ, ಜನವಿರೋಧಿ, ಪರಿಶಿಷ್ಟರ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಒಬಿಸಿ ವಿರೋಧಿಗಳು. ಅವರು ಏನಿದ್ದರೂ ಕಾರ್ಪೋರೇಟ್ ಸ್ನೇಹಿತರು, ಹಿಂದಿನ 9 ವರ್ಷಗಳಲ್ಲಿ ಸುಮಾರು 22 ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೋರೇಟ್ ಸ್ನೇಹಿತರ ಸಾಲ ಮನ್ನಾ ಮಾಡಿದ್ದೀರಿ. ಎಲ್ಲಾದರೂ ರೈತರ ಒಂದು ರೂಪಾಯಿ ಸಾಲ ಮನ್ನಾ ಮಾಡಿರುವ ಉದಾಹರಣೆ ಇದೆಯೇ ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

ಬಜರಂಗದಳ, ಶ್ರೀರಾಮಸೇನೆ ಮುಂದೆ ಬಿಟ್ಟು ಕೋಮುಗಲಭೆ ಸೃಷ್ಟಿಸಲು ಪ್ರಯತ್ನ ಆರಂಭಿಸಿದ್ದಾರೆ. ಹನುಮ ಜಯಂತಿ ಮಾಡುವುದು ಬಿಜೆಪಿ ಮಾತ್ರವಲ್ಲ, ಇತರೆ ಸಮುದಾಯದವರು. ಬಿಜೆಪಿಗೂ ಹನುಮನಿಗೂ ದೂರ ದೂರ. ಹಿಂದುಳಿದವರ ಓಲೈಕೆಗೆ ಇತ್ತೀಚೆಗೆ ಕತ್ತಿಗೆ ಕೇಸರಿ ಶಾಲು ಧರಿಸಿ ಶ್ರೀರಂಗಪಟ್ಟಣದಲ್ಲಿ ದೊಡ್ಡ ಮೆರವಣಿಗೆ ಮಾಡಿದರು. ಇಲ್ಲಿ ಸ್ಥಳೀಯರಿಗಿಂತ ಹೊರಗಿನಿಂದ ಕರಾವಳಿ ಭಾಗದಿಂದ ಕರೆತಂದಿದ್ದರು ಎಂದು ಎಂ.ಲಕ್ಷ್ಮಣ್ ದೂರಿದರು.

ಬಿಜೆಪಿಯವರು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕೋಮುಗಲಭೆ ಸೃಷ್ಟಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಅಲ್ಪಸಂಖ್ಯಾತ ಸಮುದಾಯದವರು ಕಳೆದ ವಿಧಾನಸಭೆ ಚುನಾವಣೆ ವೇಳೆ ತೋರಿದ ಸಹನೆಯನ್ನು ತೋರಬೇಕು ಎಂದು ಮನವಿ ಮಾಡುತ್ತೇನೆ ಎಂದು ಎಂ.ಲಕ್ಷ್ಮಣ್ ಮನವಿ ಮಾಡಿದರು.

ನಮ್ಮ ಐದನೇ ಗ್ಯಾರಂಟಿ ಯೋಜನೆ ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದು, 5.69 ಲಕ್ಷ ಯುವಕರಿಗೆ ಪ್ರೋತ್ಸಾಹಧನ ನೀಡಲಿದ್ದೇವೆ. ಇದಲ್ಲದೆ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾಗಿದೆ. ರಾಜ್ಯದ ಶೇ.96ರಷ್ಟು ಜನರಿಗೆ ಒಂದಲ್ಲಾ ಒಂದು ಯೋಜನೆ ತಲುಪುತ್ತಿದೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂತಹ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಯಾವುದೇ ನಾಯಕರು ದಮ್ಮು, ತಾಕತ್ತು ಬಗ್ಗೆ ಮಾತನಾಡುತ್ತಾ ತೊಡೆ ತಟ್ಟುತ್ತಿದ್ದಾರೆ. ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಮಾಡಲು ಮೈ ಪರಚಿಕೊಳ್ಳುತ್ತಿದ್ದಾರೆ. ಅದರಿಂದ ಗಾಯವಾಗುತ್ತದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮೂರು ಬಾರಿ ಅಧಿವೇಶನ ನಡೆದಿದ್ದರೂ ಇತ್ತೀಚೆಗಷ್ಟೇ ಪರಿಷತ್ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆ ಬಗ್ಗೆ ಅವರದೇ ಪಕ್ಷದ ನಾಯಕರು ಬೇರೆ ಬೇರೆ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದರು.

ಬಗರ್ ಹುಕ್ಕುಂ ಸಾಗುವಳಿ ಸಕ್ರಮ ಮಾಡುವ ವಿಚಾರದಲ್ಲಿ ಯಡಿಯೂರಪ್ಪನವರ ಆಶ್ವಾಸನೆ ಈಡೇರಲಿಲ್ಲ. ಈಗ ಕಾಂಗ್ರೆಸ್ ಸರಕಾರ ಈ ಪ್ರಕರಣಗಳನ್ನು ಸಮರೋಪಾದಿಯಲ್ಲಿ ಬಗೆಹರಿಸುತ್ತಿದೆ. ಫಸಲ್ ಭಿಮಾ ಯೋಜನೆಯಲ್ಲಿ ಕರ್ನಾಟಕದ 50 ಲಕ್ಷ ರೈತರಿಗೆ ಹಣ ಪಾವತಿಯಾಗಿಲ್ಲ ಎಂದು ಸಿಎಜಿ ವರದಿ ಹೇಳುತ್ತಿದೆ. ರೈತರಿಗೆ ನೆರವಾಗದವರು ಒಂದು ಹೇಳಿಕೆ ಇಟ್ಟುಕೊಂಡು ಟೀಕೆ ಮಾಡುವುದನ್ನು ಬಿಡಬೇಕು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News