ಕೆಆರ್‌ಐಡಿಎಲ್ ಕಾಮಗಾರಿಗಳ ಪಾರದರ್ಶಕ ಪ್ರಕ್ರಿಯೆಗಾಗಿ ‘ಗಾಂಧಿ ಸಾಕ್ಷಿ ಕಾಯಕ 2.0 ಲೋಕಾರ್ಪಣೆ’

Update: 2024-10-02 13:54 GMT

ಬೆಂಗಳೂರು : ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿರ್ವಹಿಸುವ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ಮಾಹಿತಿಗಳು, ಕಾಮಗಾರಿಗಳನ್ನು ವಹಿಸುವ ಇಲಾಖೆಗಳಿಂದ ಬಿಡುಗಡೆಯಾಗುವ ಅನುದಾನದ ಸ್ವೀಕೃತಿ ಹಾಗೂ ಬಳಕೆ, ಲೆಕ್ಕಪತ್ರಗಳ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿರುವ ‘ಗಾಂಧಿ ಸಾಕ್ಷಿ ಕಾಯಕ 2.0’(ವರ್ಕ್ ಮಾನಿಟರಿಂಗ್ ಸಿಸ್ಟಂ) ತಂತ್ರಾಂಶವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ವಿಕಾಸಸೌಧದಲ್ಲಿ ಲೋಕಾರ್ಪಣೆಗೊಳಿಸಿದರು.

ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೆಆರ್‌ಐಡಿಎಲ್ ಸಂಸ್ಥೆಯು ರಾಜ್ಯಾದ್ಯಂತ ತನ್ನ ಜಾಲವನ್ನು ಹೊಂದಿದ್ದು, ಸರಕಾರದ ವತಿಯಿಂದ ಕೈಗೊಳ್ಳಲಾಗುವ ನಿರ್ಮಾಣ ಯೋಜನೆಗಳು ಹಾಗೂ ವಿವಿಧ ಇಲಾಖೆಗಳು ವಹಿಸುವ ಕಟ್ಟಡಗಳು, ರಸ್ತೆ ಅಭಿವೃದ್ಧಿ ಮೊದಲಾದ ಕಾಮಗಾರಿಗಳನ್ನು ಕಳೆದ 51 ವರ್ಷಗಳಿಂದ ನಿಗದಿತ ಕಾಲಾವಧಿಯಲ್ಲಿ ಉತ್ತಮ ಗುಣಮಟ್ಟದಿಂದ ಅನುಷ್ಟಾನಗೊಳಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕೆಆರ್‌ಐಡಿಎಲ್ ಸಂಸ್ಥೆಯ ವಹಿವಾಟನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸೂಕ್ತ ತಂತ್ರಾಂಶದ ಅವಶ್ಯಕತೆ ಇದ್ದ ಕಾರಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗರ್ನೆನ್ಸ್ ಮೂಲಕ ಈ ತಂತ್ರಾಂಶ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ತಂತ್ರಾಂಶದ ವಿವರಗಳು: ಕಾಮಗಾರಿ ವಹಿಸುವ ಇಲಾಖೆಗಳು ಅನುದಾನಗಳನ್ನು ನಿಗಮದ ಕೇಂದ್ರ ಕಚೇರಿಯ ಖಾತೆಗೆ ನೇರವಾಗಿ ಜಮೆ ಮಾಡುವ ಸೌಲಭ್ಯವನ್ನು ಒಳಗೊಂಡ ಈ ತಂತ್ರಾಂಶ, ಗ್ರೂಪ್ ಲೀಡರ್‌ಗಳು ಮತ್ತು ಸಾಮಗ್ರಿಗಳ ಸರಬರಾಜುದಾರರು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಹಾಗೂ ಇವರಿಗೆ ಆನ್ಲೈನ್ ಮೂಲಕ ಹಣ ಬಿಡುಗಡೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಕಾಮಗಾರಿಗಳ ನಿರ್ವಹಣೆಗಾಗಿ ಕೇಂದ್ರ ಕಚೇರಿಯ ಖಾತೆಯಿಂದ ಉಪವಿಭಾಗಗಳಿಗೆ ಅನುದಾನ ಬಿಡುಗಡೆ. ಕಾಮಗಾರಿಗಳ ಪ್ರಗತಿಯ ವಿವಿಧ ಹಂತಗಳ ಛಾಯಾಚಿತ್ರಗಳ ಜಿಯೋ ಟ್ಯಾಗ್ ಛಾಯಾಚಿತ್ರಗಳ ಆರೋಹಣ. ಕಾಮಗಾರಿಗಳ ಲೆಕ್ಕಪತ್ರಗಳ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅನುಕೂಲಗಳು: ಕಾಮಗಾರಿ ವಹಿಸುವ ಇಲಾಖೆಗಳು ಬಿಡುಗಡೆ ಮಾಡುವ ಅನುದಾನಗಳ ಯೋಜನಾವಾರು ಬಿಡುಗಡೆ, ಕಾಮಗಾರಿಗಳ ಪ್ರಗತಿಗೆ ವ್ಯಯಿಸಲಾದ ವೆಚ್ಚ, ಉಳಿಕೆ ಅನುದಾನಗಳ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ. ಜಿಯೋ ಟ್ಯಾಗ್ ಹಾಗೂ ಜಿಯೋ ಫೆನ್ಸಿಂಗ್ ಛಾಯಾಚಿತ್ರಗಳ ಆರೋಹಣ ಮಾಡುವ ಕಾರಣದಿಂದ, ಡೂಪ್ಲಿಕೇಟ್ ಕಾಮಗಾರಿಗಳನ್ನು ನಿರ್ವಹಿಸುವ ಸಾಧ್ಯತೆಗಳನ್ನು ತಡೆಯಬಹುದು ಎಂದು ಅವರು ಹೇಳಿದರು.

ಕಾಮಗಾರಿಗಳ ನಿರ್ವಹಣೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿ, ವಿತರಣೆ ಮುಂತಾದ ವಿವರಗಳನ್ನು ದಾಖಲಿಸುವ ಕಾರಣದಿಂದ ಸಾಮಗ್ರಿಗಳ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಪಡೆಯಲು ಅನುಕೂಲವಾಗುವುದು. ಪ್ರತಿ ಕಾಮಗಾರಿಯ ವಿವಿಧ ಹಂತಗಳ ಪ್ರಗತಿಯ ವಿವರಗಳು, ಛಾಯಾಚಿತ್ರಗಳು, ಆ ಕಾಮಗಾರಿಗೆ ಬಿಡುಗಡೆಯಾದ ಅನುದಾನ, ವೆಚ್ಚ ಹಾಗೂ ಉಳಿದಿರುವ ಅನುದಾನ ಲಭ್ಯತೆಯ ವಿವರಗಳು ನೈಜಸಮಯದಲ್ಲೇ ಲಭ್ಯವಾಗುವ ಕಾರಣ, ಕಾಮಗಾರಿಗಳ ಮೇಲ್ವಿಚಾರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕಾಮಗಾರಿಗಳ ಅಂದಾಜು ಮೊತ್ತ ಹಾಗೂ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚ ಮಾಡುವುದು ಹಾಗೂ ಆಯಾ ಕಾಮಗಾರಿಗಾಗಿ ಬಿಡುಗಡೆಯಾದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲು ಸಾಧ್ಯವಾಗದಂತೆ ತಡೆಯಬಹುದಾಗಿದೆ. ಈ ತಂತ್ರಾಂಶವು ಜಿ.ಎಸ್.ಟಿ-ವ್ಯಾಲಿಡೇಶನ್ ಆಪ್ ಹೊಂದಿರುವ ಕಾರಣ ನಕಲಿ ಅಥವಾ ಅಸಮರ್ಪಕ ಜಿ.ಎಸ್.ಟಿ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿ.ಎಸ್.ಟಿ ಬಿಲ್‍ಗಳ ನಿರ್ವಹಣೆ ಸುಲಭ ಸಾಧ್ಯವಾಗಲಿದ್ದು, ನಿಗಮಕ್ಕೆ ಉಂಟಾಗುವ ಸಂಭವನೀಯ ನಷ್ಟವನ್ನು ತಪ್ಪಿಸಬಹುದಾಗಿದೆ. ಹಣಕಾಸಿನ ವ್ಯವಹಾರದ ಸುರಕ್ಷೆತೆಗಾಗಿ ಡಿಜಿಟಲ್ ಸಹಿ ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಲಾಗಿನ್ ಸುರಕ್ಷತೆಗಾಗಿ ಎಸ್.ಎಂ.ಎಸ್ ಮತ್ತು ಓಟಿಪಿ ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ತಂತ್ರಾಂಶದ ಮೂಲಕ ಪರಿಣಾಮಕಾರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸುವ ಕಾರಣದಿಂದ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಕಾಲಾವಧಿಯೊಳಗೆ ಅಂತಿಮಗೊಳಿಸಲು ಅನುಕೂಲವಾಗುವುದು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News