ಸುಸ್ಥಿರ ವಿಜ್ಞಾನದ ಶ್ರೇಯೋಭಿವೃದ್ಧಿಗೆ ಕಾರ್ಪೋರೇಟ್ ವಲಯ ಮುಂದಾಗಬೇಕು: ಸಚಿವ ಭೋಸರಾಜು

Update: 2024-08-24 14:45 GMT

ಬೆಂಗಳೂರು : ಸುರಕ್ಷಿತ ಮತ್ತು ಹೆಚ್ಚು ಸುಸ್ಥಿರ ಭವಿಷ್ಯದ ವಿಜ್ಞಾನದ ಶ್ರೇಯೋಭಿವೃದ್ಧಿಗಾಗಿ ಕಾರ್ಪೊರೇಟ್ ವಲಯ ಮುಂದಾಗಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದ್ದಾರೆ.

ಶನಿವಾರ ನಗರದ ಬಳ್ಳಾರಿ ರಸ್ತೆಯಲ್ಲಿರುವ ‘ಬೆಂಗಳೂರು ಸೈನ್ಸ್ ಗ್ಯಾಲರಿ’ಯಲ್ಲಿ ಆಯೋಜಿಸಲಾಗಿರುವ ಸೈನ್ಸ್-560 ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನದ ಅಡಿಪಾಯವನ್ನು ಸುಗಮಗೊಳಿಸಲು ಮತ್ತು ಈ ಕ್ಷೇತ್ರ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನಮ್ಮೊಂದಿಗೆ ಸಹಕರಿಸಲು ಮತ್ತು ಪಾಲುದಾರರಾಗಲು ಕಾರ್ಪೊರೇಟ್ ನಾಯಕರಿಗೆ ಆಹ್ವಾನ ನೀಡಲಾಗುವುದು ಎಂದರು.

ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೇರಕ ಶಕ್ತಿಗಳಾಗಿವೆ. ಎಲ್ಲರಿಗೂ ಕೈಗೆಟುಕುವ, ಒಟ್ಟಾಗಿ ಸಾಗುವ ಮೂಲಕ ಮತ್ತು ಪರಸ್ಪರ ಬೆಂಬಲಿಸುವ ಮೂಲಕ ನಾವು ಉಜ್ವಲ ಮತ್ತು ಹೆಚ್ಚು ಸಮೃದ್ಧ ಕರ್ನಾಟಕವನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ವಿಜ್ಞಾನದ ಶ್ರೀಮಂತ ಇತಿಹಾಸವನ್ನು ಆಚರಿಸುವ ಮತ್ತು ಭವಿಷ್ಯದ ಆವಿಷ್ಕಾರಗಳನ್ನು ನಾವು ಎದುರು ನೋಡುತ್ತಿದ್ದೇವೆ. ನಗರದ ವಿಜ್ಞಾನದ ಯಶೋಗಾಥೆಯನ್ನು ಇನ್ನಷ್ಟು ಬರೆಯಲಾಗುವುದು. ಉತ್ತಮವಾದದ್ದು ಇನ್ನೂ ಬರಬೇಕಿದೆ ಎಂದು ಭೋಸರಾಜು ಹೇಳಿದರು.

ಬೆಂಗಳೂರು ನಗರ ದೇಶದ ವೈಜ್ಞಾನಿಕ ಪಥವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇಂತಹ ಶ್ರೀಮಂತ ಇತಿಹಾಸದ ಆಚರಣೆಯ ಭಾಗವಾಗಿರುವುದು ಹೆಮ್ಮೆಯ ವಿಷಯ. ಇದು ನಮ್ಮ ನಗರವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರದ ವೈಜ್ಞಾನಿಕ ಪಥವನ್ನು ರೂಪಿಸಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ ಯುವ ಸಮೂಹ ಸಾರ್ವಜನಿಕವಾಗಿ ತೊಡಗಿಕೊಳ್ಳುವ ಮೂಲಕ ರಾಷ್ಟ್ರದಾದ್ಯಂತ ಸ್ಫೂರ್ತಿಯ ಮೂಲವಾಗಿದೆ ಎಂದು ಅವರು ಹೇಳಿದರು.

ರೋಹಿಣಿ ನಿಲೇಕಣಿ ಅವರಂತಹ ಲೋಕೋಪಕಾರಿಗಳ ಔದಾರ್ಯದಿಂದ ಬೆಂಬಲಿತವಾದ ಬೆಂಗಳೂರಿನಲ್ಲಿ ದಶಕಗಳ ವೈಜ್ಞಾನಿಕ ನಾವೀನ್ಯತೆ ಮತ್ತು ಸಾಧನೆಗಳನ್ನು ಅನ್ವೇಷಿಸುವ ಪಯಣ ಹೊಂದಿದ್ದೇವೆ. ಈ ಪ್ರದರ್ಶನವು ನಮ್ಮ ನಗರವನ್ನು ಜ್ಞಾನ ಮತ್ತು ಆವಿಷ್ಕಾರದ ದಾರಿದೀಪವನ್ನಾಗಿ ಮಾಡಿದ ಮನಸ್ಸು ಮತ್ತು ಸಂಸ್ಥೆಗಳಿಗೆ ಸಂದ ಗೌರವವಾಗಿದೆ ಎಂದು ಭೋಸರಾಜು ತಿಳಿಸಿದರು.

ಈ ಪ್ರದರ್ಶನ ಕೋಲಾರ ಚಿನ್ನದ ಗಣಿ ನ್ಯೂಟ್ರಿನೊ ಪ್ರಯೋಗಗಳಿಂದ ಹಿಡಿದು ಎಚ್.ಎ.ಎಲ್ ನಲ್ಲಿ ಮೊದಲ ದೇಶೀಯ ವಿಮಾನದ ಅಭಿವೃದ್ಧಿಯವರೆಗೆ ನಮ್ಮನ್ನು ಕರೆದೊಯ್ಯುತ್ತದೆ. ಇದು ಪ್ರಮುಖ ವೈಜ್ಞಾನಿಕ ಸಾಧನೆಗಳಲ್ಲಿ ನಗರದ ಪಾತ್ರವನ್ನು ಅನಾವರಣಗೊಳಿಸುತ್ತದೆ. ಇಂತಹ ಉತ್ತಮ ಪ್ರದರ್ಶನಗಳನ್ನ ಸೈನ್ಸ್ ಗ್ಯಾಲರಿಯಲ್ಲಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ 10 ಕೋಟಿ ರೂಪಾಯಿಗಳ ಕಾರ್ಪಸ್ ಫಂಡ್ ನೀಡಿದೆ ಎಂದು ಭೋಸರಾಜು ಹೇಳಿದರು.

ಈ ಪ್ರದರ್ಶನವು ಭವಿಷ್ಯದ ಪೀಳಿಗೆಯ ಚಿಂತಕರು ಮತ್ತು ನವೋದ್ಯಮಿಗಳಿಗೆ ಸ್ಫೂರ್ತಿ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸರಕಾರ ಬದ್ಧವಾಗಿದೆ ಎಂದು ಅವರು ನುಡಿದರು.

ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಲೇಖಕಿ ರೋಹಿಣಿ ನೀಲೆಕಣಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News