ಕಮಲ ಪಾಳೆಯದವರೇ, ನಿಮ್ಮ 'ಕಮಲ ದಳ'ದಲ್ಲೇ ಇದೆ ಡೇಂಜರ್: ದಿನೇಶ್ ಗುಂಡೂರಾವ್

Update: 2024-04-30 07:38 GMT

ಬೆಂಗಳೂರು, ಎ.30: "ಕಮಲ ಪಾಳೆಯದವರೇ ಯಾರು ಡೇಂಜರ್..? ನಿಮ್ಮ 'ಕಮಲ ದಳ'ದಲ್ಲೇ ಇದೆ ಡೇಂಜರ್..!! ಕಣ್ಮುಂದೆ ಕಿರಾತಕ ಕೃತ್ಯಗಳನ್ನ ಕಂಡೂ, ಕಣ್ಣಾ ಮುಚ್ಚಾಲೆ ಆಡಿದ ನೀವು ಡೇಂಜರ್" ಎಂದು ಬಿಜೆಪಿಯನ್ನು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ಹಗರಣದ ಪ್ರಕರಣವನ್ನು ಮುಂದಿಟ್ಟು, ಮೈತ್ರಿ ಪಕ್ಷದ ವಿರುದ್ಧ ಹರಿಹಾಯ್ದಿರುವ ಸಚಿವ ದಿನೇಶ್ ಗುಂಡೂರಾವ್, "ಮಹಿಳೆಯರ ಮಾಂಗಲ್ಯದ ಬಗ್ಗೆ ಮಾತಾಡುವ ಮೋದಿಯವರೇ.. ಹುಬ್ಬಳ್ಳಿಯ ಹೆಣ್ಣುಮಗಳ ಹತ್ಯೆಗೆ ಅಬ್ಬರಿಸಿದಷ್ಟು, ಹಾಸನದ ಹೆಣ್ಣುಮಕ್ಕಳಿಗಾದ ಅನ್ಯಾಯಗಳ ಬಗ್ಗೆ ಏಕೆ ಅರ್ಭಟಿಸಲಿಲ್ಲ..? ಯಾರಿಗೆ ಆಶೀರ್ವದಿಸಿ ಎಂದು ಕೇಳಿದ್ದಿರೋ, ಅವರ ಅಶ್ಲೀಲದ ಬಗ್ಗೆ ನಿಮಗೆ ಮೊದಲೇ ತಿಳಿಸಿದ್ದರಂತಲ್ಲ.. ಆದರೂ, ನಿಮ್ಮ ಮಡಿಲಲ್ಲಿಟ್ಟುಕೊಂಡು ಮತ ಕೇಳಲು ಅಸಹ್ಯ ಎನಿಸಲಿಲ್ಲವೇ..?" ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

"ದುಷ್ಕೃತ್ಯಗಳನ್ನ ನಡೆಸಿದ ದುರುಳನನ್ನ ನಿಮ್ಮ ಪಕ್ಷ ಜೊತೆಗಿಟ್ಟುಕೊಂಡಿರುವುದು ದುರಂತವೇ ಸರಿ. ಕನ್ಯೆಯರ ಕಣ್ಣೀರಿಗೆ ಬೆಲೆ ಕೊಡದ ಕಮಂಗಿಗಳಿಗೆ ಕಮಲದಳ ರಾಜಕೀಯ ದಾಳವಾಗದಿರಲಿ" ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News