ಶಿಕ್ಷಣದಿಂದ ವಂಚಿತರಾಗಿರುವ ಅಲ್ಪಸಂಖ್ಯಾತರಿಗೆ ನೆರವು ನೀಡುವುದು ತಪ್ಪೇ?: ಜಿ.ಟಿ.ಪಾಟೀಲ್

ಬೆಂಗಳೂರು : ಶಿಕ್ಷಣದಿಂದ ವಂಚಿತರಾಗಿರುವ ಅಲ್ಪಸಂಖ್ಯಾತ ಸಮುದಾಯದವರಿಗೆ ನೆರವು ನೀಡುವುದು ತಪ್ಪೇ? ಅವರನ್ನು ಮುಖ್ಯವಾಹಿನಿಗೆ ತರಲು ಒತ್ತು ನೀಡುವುದು ಸರಕಾರದ ಕರ್ತವ್ಯ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹಿರಿಯ ಸದಸ್ಯ ಜಿ.ಟಿ.ಪಾಟೀಲ್ ವಾಗ್ದಾಳಿ ನಡೆಸಿದರು.
ಮಂಗಳವಾರ ವಿಧಾನಸಭೆಯಲ್ಲಿ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಜನಪರ ಬಜೆಟ್ ಅನ್ನು ಪಾಕಿಸ್ತಾನದ ಬಜೆಟ್, ಅಲ್ಪಸಂಖ್ಯಾತರ ಬಜೆಟ್ ಎಂದು ಬಿಜೆಪಿಯವರು ಯಾಕೆ ಟೀಕಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ದೇವರ ಬಳಿ ಯಾರು ಕೂಡ ತನಗೆ ಇದೇ ಜಾತಿ, ಧರ್ಮದಲ್ಲಿ ಹುಟ್ಟಿಸು ಎಂದು ಅರ್ಜಿ ಹಾಕಿರುವುದಿಲ್ಲ. ಧರ್ಮ, ಜಾತಿ, ಉಪ ಜಾತಿಗಳೆಲ್ಲವು ಮಾನವನ ಸೃಷ್ಟಿ. ಪ್ರೀತಿ, ಸೌಹಾರ್ದತೆಯಿಂದ ಬಾಳುವುದನ್ನು ನಾವು ಕಲಿಯಬೇಕು ಎಂದು ಜಿ.ಟಿ.ಪಾಟೀಲ್ ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿಯೂ ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಸರಕಾರ ಬಜೆಟ್ನಲ್ಲಿ ಘೋಷಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸದಾಗಿ ಶಾಲೆ, ಕಾಲೇಜು, ವಸತಿ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ತಿಳಿಸಿದರು.