ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

Update: 2024-07-26 11:56 GMT

ಬೆಂಗಳೂರು, ಜು.26: ರಾಜ್ಯದಲ್ಲಿ ನಿಫಾ ವೈರಸ್ ನ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನ ಯಲಹಂಕದ ದಲ್ಲಿ ಇಂದು ಡೆಂಗಿ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕೇರಳದಲ್ಲಿ ನಿಫಾ ವೈರಸ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇರಳ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ರಾಜ್ಯದಿಂದ ಕೇರಳಕ್ಕೆ ಪ್ರವಾಸ ಕೈಗೊಳ್ಳುವವರು ಎಚ್ಚರಿಕೆ ವಹಿಸಿ ಎಂದು ಮಾರ್ಗಸೂಚಿ ಹೊರಡಿಸಿದ್ದೇವೆ. ತೀರಾ ಅಗತ್ಯವಾಗಿದ್ದರೆ ಮಾತ್ರ ಕೇರಳ ಪ್ರವಾಸ ಕೈಗೊಳ್ಳಿ. ಅನಗತ್ಯವಾಗಿ ಕೇರಳಿಕ್ಕೆ ತೆರಳುವುದು ಬೇಡ ಎಂದು ಆರೋಗ್ಯ ಸಚಿವವರು ಜನರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಇತ್ತಿಚೆಗೆ ಝೀಕಾ ವೈರಸ್ ಪತ್ತೆಯಾಗಿತ್ತು. ಝೀಕಾ ವೈರಸ್ ಅಷ್ಟೊಂದು ಅಪಾಯಕಾರಿಯಲ್ಲ. ಆದರೆ ನಿಫಾ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೂಡ ಮುಂಜಾಗೃತೆ ಕ್ರಮಗಳನ್ನು ಅನುಸರಿಸಲಿದೆ ಎಂದರು.

ಡೆಂಗಿ ಪಾಸಿಟಿವ್ ಬಂದವರ ಮೇಲೆ 14 ದಿನಗಳ ವರೆಗೆ ನಿಗಾ ವಹಿಸಲು ಸೂಚನೆ

ಡೆಂಗಿಗೆ ತುತ್ತಾದ ಪ್ರತಿಯೊಬ್ಬರ ಮೇಲೆ 14 ದಿನಗಳ ವರೆಗೆ ನಿಗಾ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡೆಂಗಿ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಸತತ ಪ್ರಯತ್ನಗಳನ್ನ ಮುಂದುವರಿಸಿದೆ. ಮುಂದಿನ ತಿಂಗಳಿನಿಂದ ಡೆಂಗಿ ಪ್ರಕರಣಗಳಲ್ಲಿ ಇಳಮುಖ ಕಾಣುವ ನೀರಿಕ್ಷೆ ಹೊಂದಿದ್ದೇವೆ ಎಂದರು.

ಕೆಲವು ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಇಳಿಮುಖವಾಗಿವೆ. ರಾಜ್ಯದ ಒಟ್ಟು ಡೆಂಗಿ ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗಿ ಪ್ರಕರಣಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ವಿನ ಗಮನ ಹರಿಸಿ ಡೆಂಗಿ ಹತೋಟಿಗೆ ತರುವಂತೆ ಸೂಚಿಸಿದ್ದೇನೆ ಎಂದರು.

10 ಜಿಲ್ಲೆಗಳ ಡೆಂಗಿ ಹಾಟ್ ಸ್ಪಾಟ್ ಗಳಿಗೆ ಉಪನಿರ್ದೇಶಕರ ಮಟ್ಟದ ಅಧಿಕಾರಿಗಳನ್ನ ಕಳುಹಿಸಿಕೊಡಲಾಗುತ್ತಿದೆ. ಸೋಮವಾರ ಹಾಗೂ ಮಂಗಳವಾರ ಅಧಿಕಾರಿಗಳು ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಡೆಂಗಿ ನಿಯಂತ್ರಣ ಕ್ರಮಗಳ ಅನುಷ್ಠಾನ ಆಗಿರುವ ಬಗ್ಗೆ ವಿಶೇಷ ಗಮನಹರಿಸಲಿದ್ದಾರೆ. ಎರಡಕ್ಕಿಂತ ಹೆಚ್ಚು ಡೆಂಗಿ ಪಾಸಿಟಿವ್ ಪ್ರಕರಣಗಳು ಗೋಚರಿಸಿದರೆ ಡೆಂಗಿ ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಕಂಡುಬಂದರೆ ಅಲ್ಲಿ ಫೀವರ್ ಕ್ಲಿನಿಕ್ ಗಳನ್ನ ತೆರೆದು, ಜ್ವರ ಕಾಣಿಸಿಕೊಳ್ಳುವ ಎಲ್ಲರನ್ನ ಡೆಂಗಿ ಟೆಸ್ಟಿಂಗ್ ಗೆ ಒಳಪಡಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇದೇವೇಳೆ ಯಲಹಂಕದ ಶಿಂಗೇನಹಳ್ಳಿಯಲ್ಲಿ ಇಂದು ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ಡೆಂಗಿ ಕುರಿತು ಜಾಗೃತಿ ಮೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News