ಹಿರಿಯ ರಾಜಕಾರಣಿಯಾಗಿ ಖಂಡನೀಯ ಕೃತ್ಯ ಎಸಗಬಾರದು, ಮಾದರಿ ನಡವಳಿಕೆ ಇರಬೇಕು: ಹೈಕೋರ್ಟ್

ಬಿ.ಎಸ್.ಯಡಿಯೂರಪ್ಪ | PC : PTI
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೊಕ್ಸೊ ಪ್ರಕರಣದಲ್ಲಿ ಜಾಮೀನು ಷರತ್ತು ಸಡಿಲಿಕೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ, "ಹಿರಿಯ ರಾಜಕಾರಣಿಯಾಗಿ ಖಂಡನೀಯ ಕೃತ್ಯ ಎಸಗಬಾರದು. ಇತರರಿಗೆ ಮಾದರಿಯಾಗುವಂತಹ ನಡವಳಿಕೆ ಇರಬೇಕು" ಎಂದು ಕಿವಿಮಾತು ಹೇಳಿದೆ.
ವಿಚಾರಣೆ ವೇಳೆ ಬಿ.ಎಸ್.ಯಡಿಯೂರಪ್ಪರ ಪರ ವಕೀಲರು ವಾದ ಮಂಡಿಸಿ, ತನ್ನ ಕಕ್ಷಿದಾರರಿಗೆ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ನ್ಯಾಯಾಲಯ ಷರತ್ತು ವಿಧಿಸಿದೆ. ಹಿರಿಯ ರಾಜಕಾರಣಿಯಾಗಿರುವುದರಿಂದ ಅವರಿಗೆ ದಿಲ್ಲಿಗೆ ತೆರಳಬೇಕಿದೆ. ಅವರು ರಾಜಕೀಯ ಪಕ್ಷದ ಸಂಸದೀಯ ಸಮಿತಿ ಸದಸ್ಯರಾಗಿದ್ದಾರೆ. ಹೀಗಾಗಿ ಷರತ್ತು ಸಡಿಲಿಸಬೇಕು ವಕೀಲರು ಮನವಿ ಮಾಡಿದರು. ಈ ವೇಳೆ ಹಿರಿಯ ರಾಜಕಾರಣಿಯಾಗಿ ಖಂಡನೀಯ ಕೃತ್ಯ ನಡೆಸಬಾರದು. ಇತರರಿಗೆ ಮಾದರಿಯಾಗುವಂತಹ ನಡವಳಿಕೆ ಇರಬೇಕು ಎಂದು ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಈ ವೇಳೆ ಅರ್ಜಿದಾರ ಪರ ವಕೀಲರು, ಈ ಆರೋಪ ಸುಳ್ಳೆಂಬ ಕಾರಣಕ್ಕೆ ವಿಚಾರಣೆಗೆ ತಡೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು. ವಾದ ಆಲಿಸಿದ ಪೀಠ ಆಕ್ಷೇಪ ಸಲ್ಲಿಸಲು ಎಸ್ ಪಿಪಿಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.