ಸಮಾನತೆಯನ್ನು ಬೋಧಿಸಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಪ್ರವಾದಿ ಮುಹಮ್ಮದ್ (ಸ) : ಪ್ರೊ. ಪರಮೇಶ್ವರ
ಬೀದರ್: ಭಾರತದಲ್ಲಿ ಪ್ರಚಲಿತವಿದ್ದ ಜಾತಿ ಪದ್ದತಿಯ ರೀತಿಯಲ್ಲಿ ಅರಬ್ ದೇಶದಲ್ಲಿ ಜಾರಿಯಲ್ಲಿದ್ದ ಮೇಲು ಕೀಳು ಬುಡಕಟ್ಟುಗಳ ಭೇದವನ್ನು ಸಂಪೂರ್ಣವಾಗಿ ತೊಡೆದು ಹಾಕಿ ಎಲ್ಲಾ ಮಾನವರು ಒಂದೇ ತಂದೆಯ ಮಕ್ಕಳು ಎಂಬ ಸಂದೇಶ ನೀಡಿ ಸಮಾನತೆ ಬೋಧಿಸಿ ನಮಾಝ್ ಮತ್ತು ಒಂದೇ ತಟ್ಟೆಯಲ್ಲಿ ಊಟ ಮಾಡುವ ಪದ್ದತಿ ಜಾರಿ ಮಾಡಿದ ಸಮಾನತೆಯ ಹರಿಕಾರ ಪ್ರವಾದಿ ಮುಹಮ್ಮದ್ ಎಂದು ಬೀದರ್ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ನುಡಿದರು.
ಅವರು ಬೀದರ್ ನಗರದ ರಂಗ ಮಂದಿರದಲ್ಲಿ ʼಪ್ರವಾದಿ ಮುಹಮ್ಮದ (ಸ) ಮಹಾನ್ ಚಾರಿತ್ರ್ಯವಂತʼ ಎನ್ನುವ ವಿಷಯದ ಮೇಲೆ ಏರ್ಪಡಿಸಿದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಆಸ್ತಿಯಲ್ಲಿ ಪಾಲು ನೀಡಿ 6ನೇ ಶತಮಾನಯದಲ್ಲಿಯೇ ಮಹಿಳಾ ಹಕ್ಕುಗಳನ್ನು ನೀಡಿ ಗೌರವ ನೀಡಿದರು ಎಂದು ಹೇಳಿದರು.
ಇನ್ನೋರ್ವ ಅತಿಥಿ ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡುತ್ತ, ಪ್ರವಾದಿ ಪ್ರೀತಿಯ ಸಂದೇಶ ಸಾರಿ ಜನರ ಮಧ್ಯ ಪ್ರೀತಿಯ ಸೇತುವೆ ಕಟ್ಟಿದರು. ಕ್ಷಮಾದಾನ, ಸಹನೆ, ವಿನಮೃತೆ ಪ್ರವಾದಿಯವರ ಪ್ರಮುಖ ಗುಣಗಳು ಎಂದು ಅವರ ಜೀವನದ ಘಟನೆಗಳೊಂದಿಗೆ ತಿಳಿಸಿದರು. ಎಲ್ಲಾ ಪ್ರವಾದಿಗಳು ಹಾಗೂ ಮಹಾಪುರುಷರಂತೆ ಪ್ರವಾದಿಯವರು ವೈರಿಯನ್ನು ಪ್ರೀತಿಸಿ ಎಂಬ ಸಂದೇಶ ನೀಡಿದ್ದಾರೆ ಇದು ನಮ್ಮ ಇಂದಿನ ಅವಶ್ಯಕತೆ ಎಂದು ಹೇಳಿ ಜನರಿಗೆ ಪಾಲಿಸಲು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಹಜ್ ಸಚಿವ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರು ” ಪ್ರವಾದಿ ಮುಹಮ್ಮದ್ ಲೇಖನ ಸಂಕಲನ" ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ, ಪ್ರವಾದಿ ನುಡಿದಂತೆ ನಾವೇಲ್ಲ ನಡೆಯಬೇಕು ಎಂದು ಸಲಹೆ ನೀಡಿದರು. ಸ್ವರ್ಗ ಒಳ್ಳೆಯ ಸಂಕಲ್ಪದೊಂದಿಗೆ ಮಾಡಿದ್ದ ಉತ್ತಮ ಕರ್ಮಗಳಿಂದ ಸಿಗುತ್ತದೆ ಎಂದು ಹೇಳಿ ಸತ್ಕರ್ಮಗಳನ್ನು ಮಾಡಲು ಜನರಿಗೆ ಪ್ರೇರೆಪಿಸಿದರು ಇದೇ ಸಂದರ್ಭದಲ್ಲಿ ಸ್ವರಿಡಾಲಿಟಿ ಯುಥ್ ಮುಮೆಂಟ್ ನ ಪೋಸ್ಟರ ಬಿಡುಗಡೆ ಮಾಡಿದರು
ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಅದ್ಯಕ್ಷತೆ ವಹಿಸಿ ಮಾತನಾಡುತ್ತ, ಪ್ರವಾದಿ ಅವರು ನಮ್ಮೇಲ್ಲರ ದೇವರ ಸ್ಪಷ್ಟವಾದ ಪರಿಚಯ ಮಾಡಿಸಿದ್ದಾರೆ. ಅವನೊಬ್ಬನೆ ನಮ್ಮ ಸೃಷ್ಠಿಕರ್ತ ಹಾಗೂ ಪ್ರಭು ಆಗಿದ್ದಾನೆ ಎಂದು ಏಕ ದೇವ ಸಂದೇಶ ನೀಡಿದರು. ಪ್ರವಾದಿ ಅವರು ಜನರ ಜೋತೆ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಮೌಲ್ವಿ ಮಹ್ಮದ್ ಫಿಹಿಮೋದ್ದಿನ್, ಗೀತಾ ಪಂಡಿತರಾವ ಚಿದ್ರಿ ಮಾತನಾಡಿದರು. ಮುಹಮ್ಮದ್ ಮೌಝಮ್ ಪ್ರಾಸ್ತಾವಿಕ ಬಾಷಣ ಮಾಡಿದರು. ವಿಚಾರಗೋಷ್ಠಿ ಸೈಯದ್ ಅತಿಕುಲ್ಲ ಅವರ ಕುರ್ ಆನ್ ಪಠಣದಿಂದ ಪ್ರಾರಂಭಿಸಲಾಯಿತು. ಇದರ ಕನ್ನಡ ಅನುವಾದ ಸೈಯದ್ ಫುರ್ಖಾನ್ ಪಾಷಾ ಮಾಡಿದರು. ಮುಹಮ್ಮದ್ ನಿಝಾಮುದ್ದಿನ್ ಅತಿಥಿಗಳ ಸ್ವಾಗತ ಹಾಗೂ ನಿರೂಪಣೆ ಮಾಡಿದರು.
ವೇದಿಕೆಯಲ್ಲಿ ಮೇಲೆ ಡಿಡಿಪಿಐ ಸಲಿಂ ಪಾಷಾ, ಡಾ. ಉಸಾಮುದ್ದಿನ್ ಉಜೇರ್, ನಗರಸಬೆ ಅಧ್ಯಕ್ಷ ಮುಹಮ್ಮದ್ ಗೌಸ್, ಡಾ. ಕುಮಾರ ದೇಶಮುಖ, ಕಸಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾಥ ಗಡ್ಡೆ, ಎಂಸ್ ಮನೋಹರ, ಓಂಪ್ರಕಾಶ ರೊಟ್ಟೆ, ಡಾ. ಸಂಜೀವಕುಮಾರ ಅತಿವಾಳೆ, ವೀರಭದ್ರಪ್ಪ ಉಪ್ಪನ್ ಉಪಸ್ಥಿತರಿದ್ದರು. ವಿವಿಧ ಧರ್ಮದ ನೂರಾರು ಮಂದಿ ಪಾಲ್ಗೊಂಡಿದ್ದರು.