ಚಿಕ್ಕಮಗಳೂರು | ಪಟಾಕಿ ಸಿಡಿದು ಯುವಕ ಮೃತ್ಯು, ಮಕ್ಕಳ ಸಹಿತ ನಾಲ್ವರಿಗೆ ಗಾಯ

Update: 2023-11-15 08:18 GMT

ಚಿಕ್ಕಮಗಳೂರು, ನ.15: ಪಟಾಕಿ ಸಿಡಿದು ಯುವಕನೋರ್ವ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ಸುಣ್ಣದಹಳ್ಳಿ ನಿವಾಸಿ ಪ್ರದೀಪ್ (30) ಮೃತಪಟ್ಟವರು. ಈ ವೇಳೆ ಜೊತೆಗಿದ್ದ ಮೂವರು ಮಕ್ಕಳ ಸಹಿತ ನಾಲ್ವರು ಗಾಯಗೊಂಡಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಪ್ರದೀಪ್ ಹಾಗೂ ಮನೆಮಂದಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಅಡಿಕೆ ಗೋಟು (ಕಲ್ಲು ಆಟಂಬಾಂಬ್) ಪೆಟ್ಟಿಗೆಯನ್ನು ಪ್ರದೀಪ್ ತಾನು ಕುಳಿತಿದ್ದ ಕುರ್ಚಿಯ ಕೆಳಗೆ ಇಟ್ಟುಕೊಂಡಿದ್ದರೆನ್ನಲಾಗಿದೆ. ಬೇರೆ ಪಟಾಕಿಯ ಕಿಡಿ ಸಿಡಿದು ಕಲ್ಲು ಆಟಂಬಾಂಬ್ ಮೇಲೆ ಬಿದ್ದ ಪರಿಣಾಮ ಅದು ಏಕಾಏಕಿ ಸ್ಫೋಟಗೊಂಡಿದೆ. ಪಟಾಕಿ ಸಿಡಿದ ರಭಸಕ್ಕೆ ಪ್ರದೀಪ್ ನೆಲದಿಂದ ಸುಮಾರು ಐದು ಅಡಿ ಹಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪಟಾಕಿ ಸ್ಫೋಟದಿಂದ ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕ ಸೇರಿದಂತೆ ಮೂವರು ಮಕ್ಕಳಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ.

ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News