ಮುಡಾ ವಿಚಾರ | ಪ್ರತಿಪಕ್ಷಗಳು ಸಿಎಂ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದೆ : ಕೆ.ಜೆ.ಜಾರ್ಜ್

Update: 2024-07-29 15:40 GMT

ಚಿಕ್ಕಮಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಹಿತ ಸ್ಪಷ್ಟನೆ ನೀಡಿದ್ದರೂ, ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ ನಡೆಸುತ್ತಿವೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಆರೋಪಿದರು.

ಸೋಮವಾರ ನಗರದಲ್ಲಿ ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಮುಖ್ಯ ಮಂತ್ರಿಯವರ ಪತ್ನಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದು ಅಕ್ರಮ ಎಂಬುದು ಪ್ರತಿಪಕ್ಷದವರ ಆರೋಪ. ಆದರೆ, 50:50 ಅನುಪಾತದಲ್ಲಿ ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿದ್ದು ಯಾರು? ಬಿಜೆಪಿ ಸರಕಾರವಲ್ಲವೇ?" ಎಂದು ಪ್ರಶ್ನಿಸಿದರು.

ಈಗ ಅವರು ಮುಖ್ಯಮಂತ್ರಿ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಸತ್ಯಾಂಶವೇ ಇಲ್ಲ. ವಾಲ್ಮೀಕಿ ನಿಗಮ ಹಗರಣ ಕುರಿತು ಸದನದಲ್ಲಿ ಚರ್ಚಿಸಿದ ಪ್ರತಿಪಕ್ಷದವರು ಸರಕಾರ, ಮುಖ್ಯಮಂತ್ರಿ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿದರು. ಬಳಿಕ ಉತ್ತರಕ್ಕೂ ಅವಕಾಶ ನೀಡದೆ, ರಾಜಕಾರಣ ಮಾಡಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪತ್ರಿಕಾಗೋಷ್ಠಿ ಮೂಲಕ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ ಎಂದರು.

ನಮ್ಮ ಸರಕಾರದಲ್ಲಿ ಅಕ್ರಮ ನಡೆದಿಲ್ಲ ಎಂಬುದನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿದ್ದಾರೆ. ಆದರೂ, ಪ್ರತಿಪಕ್ಷದವರು ತಮ್ಮ ಆರೋಪ ಮುಂದುವರಿಸುತ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧದ ಆರೋಪಗಳಿಗೆ ಅವರ ಬಳಿ ದಾಖಲೆಗಳಿಲ್ಲ. ಆದರೂ, ತಮ್ಮ ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂತಹ ವಿಚಾರಗಳಲ್ಲಿ ಮಾಧ್ಯಮಗಳು ಸತ್ಯ ಸಂಗತಿಯನ್ನು ಬೆಳಕಿಗೆ ತರಬೇಕು. ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಮಾಡಲಾಗಿತ್ತು. ಆದರೆ, ಸಿಬಿಐ ತನಿಖೆ ನಡೆದು ನನ್ನನ್ನು ವಿಚಾರಣೆಗೂ ಕರೆಯಲಿಲ್ಲ. ಅಂತಿಮ ವರದಿಯಲ್ಲಿ ಈ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಸಿಬಿಐ ಹೇಳಿತ್ತು. ಆದರೆ, ಮಾಧ್ಯಮಗಳು ಅದನ್ನು ಪ್ರಸಾರ ಮಾಡಲೇ ಇಲ್ಲ. ಮುಖ್ಯಮಂತ್ರಿ ಅವರ ಪ್ರಕರಣದಲ್ಲೂ ಈ ರೀತಿ ಆಗಬಾರದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News