ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು

Update: 2024-03-19 05:27 GMT

ಬಂಟ್ವಾಳ, ಮಾ.19: ಯುವಕನೋರ್ವ ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಸೋಮವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಮೃತಪಟ್ಟವರು.

ಲೋಹಿತಾಶ್ವ ತನ್ನ ನಾಲ್ವರು ಸ್ನೇಹಿತರ ಜೊತೆ ಈಜಲೆಂದು ಶಂಭೂರಿಗೆ ಬಂದಿದ್ದರು. ಸ್ನೇಹಿತರು ಸ್ನಾನ ಮಾಡಲು ನದಿಗೆ ಇಳಿದಿದ್ದರೆ, ಲೋಹಿತಾಶ್ವ ಮಾತ್ರ ನದಿ ಕಿನಾರೆಯಲ್ಲೇ ಕುಳಿತಿದ್ದರು. ಬಳಿಕ ಅವರು ಕಾರಿನ ಬಳಿ ತೆರಳುವುದಾಗಿ ಹೇಳಿ ಹೋಗಿದ್ದರು. ಆದರೆ ಸ್ನೇಹಿತರು ಸ್ನಾನ ಮುಗಿಸಿ ಬರುವ ವೇಳೆ ಲೋಹಿತಾಶ್ವ ಕಾರಿನ ಬಳಿ ಇಲ್ಲದಿದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಅವರು ನೀರಿನಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಜೊತೆಗಿದ್ದ ಸ್ನೇಹಿತರು ಪೊಲೀಸರಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಕೈಯಲ್ಲಿ ವಾಚ್ ಹಾಗೂ ಬಟ್ಟೆ ಧರಿಸಿದ್ದ ಸ್ಥಿತಿಯಲ್ಲಿ ಲೋಹಿತಾಶ್ವರ ಮೃತದೇಹ ಕಂಡುಬಂದಿದ್ದರಿಂದ ಅವರು ನದಿಗೆ ಸ್ನಾನ ಮಾಡಲು ಇಳಿದಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಬಿದ್ದ ವೇಳೆ ಅವರ ತಲೆಗೆ ಗಾಯಗಳಾಗಿರುವುದು ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಲೋಹಿತಾಶ್ವರ ಜೊತೆಗಿದ್ದ ಸ್ನೇಹಿತರನ್ನು ತನಿಖೆ ನಡೆಸಿ ಸ್ಪಷ್ಟವಾದ ಮಾಹಿತಿ ಪಡೆಯಲಾಗುತ್ತದೆ ಎಂದು ಎಸ್ಸೈ ಹರೀಶ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಇನ್ ಸ್ಪೆಕ್ಟರ್ ಶಿವಕುಮಾರ್ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News