ಪಣಂಬೂರು | ಸಿಮೆಂಟ್ ಮಿಕ್ಸರ್ ಟ್ರಕ್ ಹರಿದು ಶಿಕ್ಷಕಿ ಮೃತ್ಯು

Update: 2024-02-24 05:55 GMT

ಪಣಂಬೂರು, ಫೆ.24: ಸಿಮೆಂಟ್ ಮಿಕ್ಸರ್ ಟ್ರಕ್ ಹರಿದು ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಪಣಂಬೂರು ಬೀಚ್ ಬಳಿ ಶುಕ್ರವಾರ ಸಂಜೆ ನಡೆದಿದೆ.

ಕುಳಾಯಿ ರೆಹಾನ್ ಇಂಟರ್ ನ್ಯಾಶನಲ್ ಸ್ಕೂಲ್ ಶಿಕ್ಷಕಿ, ಹೊನ್ನಕಟ್ಟೆ ನಿವಾಸಿ ಪೂರ್ಣಿಮಾ (29) ಮೃತಪಟ್ಟವರು.

ಪೂರ್ಣಿಮಾ ತನ್ನ ಸಹೋದರಿಯ ಜೊತೆ ದ್ವಿಚಕ್ರ ವಾಹನದಲ್ಲಿ ಸಹ ಸವಾರೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಅವರಿದ್ದ ಸ್ಕೂಟರ್ ಪಣಂಬೂರು ಗೇಲ್ ಗ್ಯಾಸ್ ಬಂಕ್ ಬಳಿ ತಲುಪಿದ ವೇಳೆ ಹಿಂದಿನಿಂದ ಎಡಭಾಗದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ನುಗ್ಗಿ ಬಂದ ಸಿಮೆಂಟ್ ಮಿಕ್ಸರ್ ಟ್ರಕ್ ಸ್ಕೂಟರ್ ನ ಹ್ಯಾಂಡಲ್ ಗೆ ತಾಗಿದೆ. ಇದರಿಂದ ಸ್ಕೂಟರ್ ಚಾಲಕಿಯ ನಿಯಂತ್ರಣ ತಪ್ಪಿದ್ದು, ಪೂರ್ಣಿಮಾ ರಾಷ್ಟ್ರೀಯ ಹೆದ್ದಾರಿಗೆ ಉರುಳಿಬಿದ್ದಿದ್ದಾರೆ. ಈ ವೇಳೆ ಪೂರ್ಣಿಮಾರ ಮೈಮೇಲೆಯೇ ಸಿಮೆಂಟ್ ಮಿಕ್ಸರ್ ಟ್ರಕ್ ಹರಿದಿದೆ ಎಂದು ತಿಳಿದು ಬಂದಿದೆ.

ಗಂಭೀರ ಗಾಯಗೊಂಡಿದ್ದ ಪೂರ್ಣಿಮಾರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಲಾರಿ ಚಾಲಕ ದೀಪಕ್ ಸುನಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News