ಬ್ಯಾರೀಸ್ ಕಲ್ಚರಲ್ ಫೋರಂ ಮಂಗಳೂರು ನೇತೃತ್ವದಲ್ಲಿ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ
ಸುರತ್ಕಲ್, ಆ.12: ಬ್ಯಾರೀಸ್ ಕಲ್ಚರಲ್ ಫೋರಂ ಮಂಗಳೂರು ನೇತೃತ್ವದಲ್ಲಿ ಮಿಸ್ಬಾಹ್ ಗ್ರೂಪ್ ಆಫ್ ಇನ್ಟಿಟ್ಯೂಷನ್ ಕಾಟಿಪಳ್ಳ ಇದರ ಸಹಭಾಗಿತ್ವದಲ್ಲಿ ಬ್ಯಾರೀಸ್ ಕಲ್ಚರಲ್ ಫೋರಂ 2023ನೇ ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ವೇತನ ವಿತರಣೆ ಮತ್ತು ಹೊಲಿಗೆಯಂತ್ರಗಳ ವಿತರಣಾ ಕಾರ್ಯಕ್ರಮ ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭಾ ಸದಸ್ಯ ಮತ್ತು ರಾಜ್ಯ ಭರವಸೆ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್, ಹಲವು ರಾಜ್ಯಗಳಲ್ಲಿ ಹೆಚ್ಚು ಯುವ ಜನರು ಐಎಎಸ್, ಐಪಿಎಸ್ ಪದವಿ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರತೀ ವರ್ಷವೂ ಶೈಕ್ಷಣಿಕ ರಂಗದಲ್ಲಿ ಉನ್ನತ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಬೆರಳೆಣಿಕೆಯ ಉನ್ನತ ಅಧಿಕಾರಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಯುವತಿಯರು ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ದಾಖಲೆ ಗಳನ್ನು ಮಾಡುತ್ತಿದ್ದಾರೆ. ಅವರಿಗೆ ಪೋಷಕರು ಮತ್ತು ಸಮಾಜ ಪ್ರೋತ್ಸಾಹ ನೀಡಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಸ್ಲಿಂ ಸಮುದಾಯ ಎಲ್ಲಾ ರಂಗಗಳಲ್ಲೂ ಕಾರ್ಯಪ್ರವೃತ್ತವಾಗಿದೆ. ಆದರೆ, ಲೋಕ ಸೇವಾ ಆಯೋಗಗಳಲ್ಲಿ ಬೆರಳೆಣಿಕಯ ಜನರಷ್ಟೇ ಸೇವೆ ಸಲ್ಲಿಸುತ್ತಿದ್ದಾರೆ. ಕಲಿಕೆಯಲ್ಲಿ ಮುಂದಿರುವ ದ.ಕ. ಮತ್ತು ಉಡುಪಿಯ ಯುವಜನತೆ ಲೋಕ ಸೇವಾ ಆಯೋಗದ ಉನ್ನತ ಹುದ್ದೆಗಳ ಕಡೆಗೆ ತಮ್ಮ ಗಮನವನ್ನು ಹರಿಸಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಬ್ಯಾರೀಸ್ ಕಲ್ಚರಲ್ ಫೋರಂ ಪ್ರತೀ ವರ್ಷ ನಡೆಸುತ್ತಿರುವ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಸದುಪ ಯೋಗವನ್ನು ಯುವ ಸಮೂಹ ಪಡೆದುಕೊಂಡು ತಮ್ಮ ಸಾಧನೆಗೆ ಹೆಜ್ಜೆಗಳಾಗಿ ಮಾರ್ಪಡಿಸಿಕೊಳ್ಳಬೇಕೆಂದರು.
ಇದೇ ಸಂದರ್ಭ ವಿದ್ಯಾರ್ಥಿಗಳ ಪೋಷಕರಿಗೆ ಮನವಿ ಮಾಡಿದ ಅವರು, ತಮ್ಮ ಮಕ್ಕಳು ಯಾವ ಕ್ಷೇತ್ರದಲ್ಲಿ ಉತ್ಸುಕರಿ ದ್ದಾರೆ ಅದೇ ಕ್ಷೇತ್ರದಲ್ಲಿ ಕಲಿಯಲು ಪ್ರೋತ್ಸಾಹಿಸಬೇಕು. ಅವರ ಉತ್ಸುಕತೆಗೆ ವಿರುದ್ಧವಾಗಿ ಪೋಷಕರು ನಡೆದುಕೊಂಡರೆ ಯಾವುದೇ ವಿದ್ಯಾರ್ಥಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಹಳ್ಳಿಯಲ್ಲಿ ಓರ್ವ ವಿದ್ಯಾವಂತನಾದರೆ ಆತನಿಂದ ಹಳ್ಳಿ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಹೆಜ್ಜೆಗಳನ್ನಿಡಬೇಕು. ಜೊತೆಗೆ ಚಿಂತನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಗುರಿ, ಸಾಧನೆಯ ಮನೋಸ್ಥೈರ್ಯ ಗಟ್ಟಿಯಾಗಿದ್ದರೆ ಯಾವುದೇ ಸಾಧನೆ ಸುಲಭದಲ್ಲಿ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬ್ಯಾರೀಸ್ ಕಲ್ಚರಲ್ ಫೋರಂ ಯುಎಇ ಅಧ್ಯಕ್ಷ ಬಿ.ಕೆ. ಯೂಸುಫ್, ಬ್ಯಾರೀಸ್ ಕಲ್ಚರಲ್ ಫೋರಂ ವಿದ್ಯಾರ್ಥಿ ವೇತನ ಸಮಿತಿಯ ಅಧ್ಯಕ್ಷ ಎಂ.ಇ. ಮೂಳೂರು, ಮಾಜಿ ಶಾಸಕ ಮೊಯ್ದಿನ್ ಬಾವ ಮೊದಲಾದವರು ಮಾತನಾಡಿದರು.
ಇದೇ ಸಂದರ್ಭ ವಿದ್ಯಾರ್ಥಿ ವೇತನ, ಕಳೆದ ಸಾಲಿನ ಪಿಯುಸಿ ಮತ್ತು ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದಿರುವ ಹಲವು ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತ ಅನ್ಶುಕುಮಾರ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್, ಯೆನೆಪೋಯ ಯುನಿವರ್ಸಿಟಿಯ ಉಪ ಕುಲಪತಿ ಎಂ. ವಿಜಯಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಎಂಇಐಎಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ, ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸ್ ಆಡಳಿತ ಸಮಿತಿ ಸದಸ್ಯ ಯು.ಟಿ. ಇಫ್ತಿಕಾರ್, ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಮಾಲಕ ಕೆ. ಮುಹಮ್ಮದ್ ಹಾರಿಸ್, ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ ಮಾಲಕ ಅಬ್ದುಲ್ ರೌಫ್, ತೀರ್ಥಹಳ್ಳಿ ನ್ಯಾಷನಲ್ ಗ್ರೂಪ್ ಮಾಲಕ ಅಬ್ದುಲ್ ರಹ್ಮಾನ್, ಹೋಟೆಲ್ ಪಿಝಾ ಮಾಲಕ ಎಸ್. ಎ. ಶರೀಫ್, ಮಂಗಳೂರು ಸಿ.ಆರ್. ಫ್ರೂಟ್ಸ್ ಮಾಲಕ ಸಿ.ಆರ್. ಅಬೂಬಕರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಮ್ಯಾನೇಜರ್ ರಹ್ಮತ್ ಎಸ್.ಎ., ಮಂಗಳೂರು ಹೋಮ್ ಪ್ಲಸ್ ಮಾಲಕ ಆಸಿಫ್ ಸೂಫಿಖಾನ್, ಯುಎಇ ನಫೀಸ್ ಗ್ರೂಪ್ ಮಾಲಕ ಅಬೂಸಾಲಿಹ್ ಹುಸೈನ್, ಕೆಎಸ್ಎ ಅಲ್ ಜುಬೈಲ್ನ ಎಕ್ಸ್ಪಟೈಸ್ ಗ್ರೂಪ್ ಮಾಲಕ ಶೇಖ್ ಕರ್ನಿರೆ, ಯುಎಇ ಝಾಯೆದ್ ಫೌಂಡೇಶನ್ನ ಅಬ್ದುಲ್ಲಾ ಮದುಮೂಲೆ, ಯುಎಇ ಗಡಿಯಾರ್ ಗ್ರೂಪ್ ಮಾಲಕ ಇಬ್ರಾಹಿಂ ಗಡಿಯಾರ್, ಕೆಎಸ್ಎ ದಾರಮ ಫ್ಯಾಬ್ರಿಕ್ಸ್ ಮಾಲಕ ಎನ್. ಅಬ್ದುಲ್ ಸಮದ್, ಕೆಎಸ್ಎ ಅಲ್ ಜುಬೈಲ್ ಟೇಬಲ್ ಗ್ರೂಪ್ ಮಾಲಕ ಮುಹಮ್ಮದ್ ಮುಬೀನ್, ಮಿಸ್ಬಾಹ್ ಸಮೂಹ ವಿದ್ಯಾ ಸಂಸ್ಥೆಯ ಚೇರ್ಮ್ಯಾನ್ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಬ್ಯಾರೀಸ್ ಕಲ್ಚರಲ್ ಫೋರಂ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಬ್ಯಾರೀಸ್ ಕಲ್ಚರಲ್ ಫೋರಂ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಅವರಿಂದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಮುಹಮ್ಮದ್ ಮುಫೀಝ್ ಕಿರಾಅತ್ ಪಠಿಸಿದರು. ಮಿಸ್ಬಾಹ್ ಸಮೂಹ ವಿದ್ಯಾ ಸಂಸ್ಥೆಯ ಚೇರ್ಮ್ಯಾನ್ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಸ್ವಾಗತಿಸಿದರು. ಮಿಸ್ಬಾಹ್ ಶಾಲೆಯ ಪುಟಾಣಿ ಮಕ್ಕಳಿಂದ ಸ್ವಾಗತ ಹಾಡು ಹಾಗೂ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಅಬ್ದುಲ್ ಲತೀಫ್ ಮುಲ್ಕಿ ವಂದಿಸಿದರು.