ಹಾಸನ: ದಲಿತನ ಮೇಲೆ ಸವರ್ಣೀಯರಿಂದ ಕಲ್ಲು ತೂರಾಟ, ಬೈಕ್ ಗೆ ಬೆಂಕಿ; ಆರೋಪ

Update: 2024-03-02 17:25 GMT

ಹಾಸನ: ಜಮೀನು ವಿವಾದದ ಹಿನ್ನೆಲೆಯಲ್ಲಿ ಸವರ್ಣಿಯರು ದಲಿತ ವ್ಯಕ್ತಿಯ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಸುಟ್ಟು ಹಾಕಿದ್ದಾರೆನ್ನಲಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬಂಡಿಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಗ್ರಾಮದ ರಂಗಪ್ಪಎಂಬವರ ಮೇಲೆ ಕಲ್ಲು ತೂರಾಟ ನಡೆಸಿ, ಅವರ ಬೈಕ್ ಗೆ ಬೆಂಕಿಹಚ್ಚಿದ್ದಾರೆ ಎನ್ನಲಾಗಿದೆ. ಆರೋಪಿಗಳಾದ ಮದನ್ ಹಾಗೂ ಮಂಜು ಪರಾರಿಯಾಗಿದ್ದಾರೆ ತಿಳಿದು ಬಂದಿದೆ.

ರಂಗಪ್ಪ ಅವರಿಗೆ ಸರಕಾರದಿಂದ ಮಂಜೂರಾಗಿದ್ದ ಭೂಮಿ ತಮಗೆ ಸೇರಿದ್ದು ಎಂದು ಗ್ರಾಮದ ಕೆಲವರು ತಗಾದೆ ತೆಗೆದಿದ್ದರು. ಆದರೆ ರಂಗಪ್ಪ ಅವರು ಭೂಮಿ ಹದ್ದುಬಸ್ತು ಮಾಡಿಸಲು ಶನಿವಾರ ಸರ್ವೇ ಮಾಡಿಸಿ ತಮ್ಮ ಜಮೀನಿನ ಗಡಿ ಗುರುತು ಮಾಡಿಸಿ ಜೆಸಿಬಿ ಬಳಸಿ ಹೊಲ ಸಮತಟ್ಟುಗೊಳಿಸುತ್ತಿದ್ದಾಗ ಆರೋಪಿಗಳು ಸ್ಥಳಕ್ಕೆ ಬಂದು ವಿರೋಧ ವ್ಯಕ್ತಪಡಿಸಿದಲ್ಲದೇ ಕಲ್ಲು ತೂರಾಟ ನಡೆಸಿದರು. ಅಲ್ಲದೆ ಜಮೀನಿನ ಬಳಿ ನಿಲ್ಲಿಸಿದ್ದ ರಂಗಪ್ಪ ಅವರ ಬೈಕ್ ಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News