ಬೆಳಗಾವಿಯಲ್ಲಿ ʼಅತೃಪ್ತʼ ನಾಯಕರ ಸಭೆ: ಕೇಂದ್ರದ ನಾಯಕರು ಮಧ್ಯಪ್ರವೇಶಿಸದಿದ್ದರೆ ಬಿಜೆಪಿ ಇಬ್ಬಾಗವಾಗಲಿದೆ ಎಂದ ಕೆ.ಎಸ್. ಈಶ್ವರಪ್ಪ

Update: 2024-08-12 09:53 GMT

ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಬಿಜೆಪಿಯ 12 ಜನ ಪ್ರಮುಖರು ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಲು ಬೆಳಗಾವಿಯಲ್ಲಿ ಸಭೆ ನಡೆಸಿದ್ದು ನನಗೆ ಆಘಾತವಾಗಿದೆ. ಕೂಡಲೇ ಕೇಂದ್ರ ನಾಯಕರು ಇವರನ್ನು ಕರೆದು ಮಾತನಾಡಬೇಕು, ಇಲ್ಲವಾದರೆ ಪಕ್ಷ ಇಬ್ಬಾಗವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸೇರಿದಂತೆ ಬಿಜೆಪಿಯ 12 ಜನ ಪ್ರಮುಖರು ಸಂಘಟನೆಯಲ್ಲಿದ್ದವರು, ಪಕ್ಷವನ್ನು ಕಟ್ಟಿದ್ದಾರೆ. ಏನೇನು ನೋವು ಅನುಭವಿಸಿದ್ದಾರೆಂದು ಅವರು ಹೇಳಿಕೊಂಡಿಲ್ಲ. ಅವರು ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. 12 ಜನ ಮಾತ್ರ ಸಭೆ ನಡೆಸಿದ್ದಾರೆಂದು ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು ಎಂದು ಹೇಳಿದರು.

ಕೇಂದ್ರದ ನಾಯಕರು ಪಾದಯಾತ್ರೆ ನಡೆಸುವವರನ್ನು ಕರೆದು ಮಾತನಾಡಬೇಕು. ಪಕ್ಷ ಕಟ್ಟಿದ ನಾಯಕರನ್ನು ಮಾತನಾಡಿಸದೆ ಹೋದರೆ ಇನ್ನಷ್ಟು ಜನ ಸೇರ್ಪಡೆಯಾಗುತ್ತಾರೆ. ಬರುವಂತಹ ದಿನದಲ್ಲಿ ಸಂಘಟನೆ ಛಿದ್ರ, ಛಿದ್ರವಾಗಲಿದೆ. ಈಗ ಸಾಕಷ್ಟು ಜನ ಕೆಲಸ ಮಾಡದ ಕಾರಣಕ್ಕೆ 66 ಕ್ಕೆ ಕುಸಿದಿದ್ದೇವೆ. ನಾವು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅಕಸ್ಮಾತ್ ಕೇಂದ್ರದ ನಾಯಕರು ಗಮನಿಸದೆ ಹೋದರೆ ಪಕ್ಷ ಕಟ್ಟಿದವರಿಗೆ ನೋವಾಗುತ್ತದೆ. ನನಗೆ ಯಾರ ಮುಲಾಜು ಇಲ್ಲ, ನನಗೆ ಪಕ್ಷ ಮುಖ್ಯ. ಪಕ್ಷದಲ್ಲಿನ ಬೆಳವಣಿಗೆಯ ಕುರಿತು ಕೇಂದ್ರದ ನಾಯಕರು ಬೇಗ ಗಮನ ಹರಿಸಬೇಕು. ಇಲ್ಲವಾದಲ್ಲಿ ತಾಲೂಕು ಮಟ್ಟದಲ್ಲಿ ಪಾರ್ಟಿ ಎರಡಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಸಿದರು.

ಬೆಳಗಾವಿಯ ನಂತರ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅವರು ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಪಕ್ಷ ಎರಡಾಗುತ್ತದೆ. ಪ್ರತಿ ತಾಲೂಕಿನಲ್ಲಿ ಬಿಜೆಪಿ ಇಬ್ಭಾಗವಾಗುತ್ತದೆ ಎಂದರು.

ಪಕ್ಷದ ವಿಚಾರದಡಿ ಕೆಲಸ ಮಾಡಿದ್ದರೂ ಬಹಳ ಜನಕ್ಕೆ ನೋವಿದೆ. ಲೋಕಸಭೆ ಚುನಾವಣೆಯ ವೇಳೆಗೆ ವಿಜಯೇಂದ್ರರನ್ನು ಅಧ್ಯಕ್ಷರಾನ್ನಾಗಿ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಅಧಿಕಾರ ನೀಡಿದಕ್ಕೆ ಲೋಕಸಭೆಯಲ್ಲಿ 25 ರಿಂದ 17ಸ್ಥಾನಕ್ಕೆ ಇಳಿದೆವು. ಮೋದಿ ಇದ್ದು, ಪಕ್ಷ ಬಲ ಇದ್ದಾಗ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿದ್ದೆವು. ಈಗ ಜೆಡಿಎಸ್ ಹೊಂದಾಣಿಕೆ ಮಾಡದೆ ಹೋಗದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಮೋದಿ ನಮ್ಮ ನೆಚ್ಚಿನ ನಾಯಕ. ಯತ್ನಾಳ್, ಜಾರಕಿಹೊಳಿ, ಸಿದ್ದೇಶ್ವರ್ ಹೀಗೆ ಅನೇಕರು ಸಭೆ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ. ಯಡಿಯೂರಪ್ಪ ಕುಟುಂಬದವರ ಕೈಯಲ್ಲಿ ಪಾರ್ಟಿ ಕೊಡಲು ಕೇಂದ್ರದ ನಾಯಕರಿಗೆ ಯಾಕೆ ಮೋಹ. ಸಾಮೂಹಿಕ ನಾಯಕತ್ವ ಎಂದು ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯುತ್ತಿತ್ತು. ಯಡಿಯೂರಪ್ಪ ಸ್ವಜನ ಪಕ್ಷಪಾತ ಮಾಡಿದ್ದಾರೆ. ಬಿಜೆಪಿಯಲ್ಲಿ ಹಿಂದುತ್ವ ಹೊರಟು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿದೆ. ಇದಕ್ಕೆ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದ ಈಶ್ವರಪ್ಪ, ಸಲ್ಮಾನ್ ಖುರ್ಷಿದ್ ದೇಶದ್ರೋಹ ಹೇಳಿಕೆ ನೀಡಿದ್ದಾರೆ. ಇವರನ್ನು ತಕ್ಷಣ ಬಂಧಿಸಬೇಕು. ಬಾಂಗ್ಲಾದಂತೆ ಭಾರತದಲ್ಲಿ ಅಲ್ಪ ಸಂಖ್ಯಾಂತರು ಪ್ರತಿಭಟನೆ ನಡೆಸುತ್ತಾರೆ. ನರಮೇಧ ಮಾಡುತ್ತಾರೆ ಎಂದು ಹೇಳಿದ್ದಾರೆ, ಇದು ಖಂಡನೀಯ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News