ಹೆಣದ ಮೇಲೂ ರಾಜಕಾರಣ ಮಾಡುವುದು ಬಿಜೆಪಿಯವರಿಗೆ ಹೊಸದಲ್ಲ: ಎ.ಎಸ್.ಪೊನ್ನಣ್ಣ
ಬೆಂಗಳೂರು : ಬಿಜೆಪಿಯವರು ಹೆಣದ ಮೇಲೂ ರಾಜಕಾರಣ ಮಾಡಲು ಮುಂದಾಗುತ್ತಾರೆ. ಸಾವಿನ ಮನೆಯಲ್ಲಿ ರಾಜಕಾರಣ ಅವರಿಗೆ ಹೊಸದಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ, ಇದರಲ್ಲಿ ಅಪರಾಧಿಗಳು ಯಾರೆಂಬ ತನಿಖೆಯಿಂದ ತಿಳಿದು ಬರಬೇಕಿದೆ ಎಂದರು.
ಬಿಜೆಪಿಯವರು ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಡಿಸಿಪಿಗೆ ಕೊಡಗಿನಿಂದ ಬಿಜೆಪಿ ನಾಯಕರು ಕರೆ ಮಾಡಿದ್ದಾರೆ. ನಾನು ಸಂದರ್ಭ ಬಂದಾಗ ಅವರ ಹೆಸರು ಹೇಳುತ್ತೇನೆ, ಯಾಕೆ ಕರೆ ಮಾಡಬೇಕು ಎಂದು ಎ.ಎಸ್.ಪೊನ್ನಣ್ಣ ಪ್ರಶ್ನಿಸಿದರು.
ನಾನು ಒಂದು ದಿನವೂ ವಿನಯ್ ಬಳಿ ಮಾತನಾಡಿಲ್ಲ. ಅವರಿಗೂ ನಾನು ಪರಿಚಯವಿಲ್ಲ. ಈಗ ಕೊಲೆಗಡುಕರು ಎಂದು ಹಾಕಿ ನನ್ನ, ಮಂತರ್ ಗೌಡ ಹಾಗೂ ತೆನ್ನೀರಾ ಮಹೀನ ಚಿತ್ರ ಹಾಕಿ ಬರೆಯುತ್ತಿರುವುದಕ್ಕೆ ಯಾರು ಜವಾಬ್ದಾರರು. ಬಿಜೆಪಿಯವರ ಕೀಳು ಮಟ್ಟದ ರಾಜಕಾರಣಕ್ಕೆ ಇಂದು ಅಮಾಯಕನಾದ ವಿನಯ್ ಸೋಮಯ್ಯ ಬಲಿಯಾಗಿದ್ದಾನೆ ಎಂದು ಎ.ಎಸ್.ಪೊನ್ನಣ್ಣ ತಿಳಿಸಿದರು.