ಬೆಂಗಳೂರು | ಪ್ರೀತಿಗೆ ವಿರೋಧ; ತಂದೆಯಿಂದಲೇ ಮಗಳ ಹತ್ಯೆ

Update: 2023-10-23 09:51 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರಿಯಕರನ ಜತೆ ನಾಪತ್ತೆಯಾಗಿದ್ದ ಪುತ್ರಿಯನ್ನು ತಂದೆಯೇ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಗರದ  ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ವರದಿಯಾಗಿದೆ.

ಮೈಸೂರಿನ ಎಚ್‌.ಡಿ. ಕೋಟೆ ಮೂಲದ ಪಲ್ಲವಿ (17) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಆಕೆಯ ತಂದೆ ಗಣೇಶ್‌ (50)ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಎಚ್‌.ಡಿ. ಕೋಟೆ ತಾಲೂಕಿನ ಶಾಲೆಯೊಂದರಲ್ಲಿ ಓದುತ್ತಿದ್ದ ಬಾಲಕಿಯನ್ನು ಸ್ಥಳೀಯ ಯುವಕನೊಬ್ಬ ಪರಿಚಯ ಮಾಡಿಕೊಂಡಿದ್ದ. ನಂತರ, ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಈ ಸಂಗತಿ ತಿಳಿದ ಪೋಷಕರು, ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಆದರೂ ಬಾಲಕಿ ಪದೇ ಪದೇ ಯುವಕನನ್ನು ಭೇಟಿಯಾಗಲು ಹೋಗುತ್ತಿದ್ದ ವಿಚಾರ ತಿಳಿದ ತಂದೆ,  ಪರಪ್ಪನ ಅಗ್ರಹಾರ ಬಳಿಯ ನಾಗನಾಥಪುರದ ಡಾಕ್ಟರ್ಸ್‌ ಲೇಔಟ್‌ ನಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗಿದ್ದರುʼ ಎಂದು ಹೇಳಲಾಗಿದೆ. 

ʼಸಂಬಂಧಿ ಮನೆಯಲ್ಲಿದ್ದಾಗಲೂ ಬಾಲಕಿ, ಯುವಕನಿಗೆ ಕರೆ ಮಾಡುತ್ತಿದ್ದಳು. ಅಲ್ಲದೇ, ಯುವಕನ ಜೊತೆ ಆಕೆ ಅ. 14ರಂದು ನಾಪತ್ತೆಯಾಗಿದ್ದು, ಪೊಲೀಸರು ಎರಡೇ ದಿನದಲ್ಲಿ ಪಲ್ಲವಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು.  ಈ ವಿಚಾರ ತಿಳಿದ ಆಕೆಯ ತಂದೆ ಹಾಗೂ ತಾಯಿ, ಎಚ್‌.ಡಿ. ಕೋಟೆಯಿಂದ ಶನಿವಾರ (ಅ. 21) ಬೆಳಗ್ಗೆ ಸಂಬಂಧಿಕರ ಮನೆಗೆ ಬಂದಿದ್ದಾರೆ. ಈ ವೇಳೆ ಪೋಷಕರು ಮಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ತಂದೆ ಹಾಗೂ ಮಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿತ್ತು. ಇದೇ ಸಂದರ್ಭದಲ್ಲಿ ತಂದೆ, ಮಚ್ಚಿನಿಂದ ಮಗಳ ಮೇಲೆ ಗಂಭೀರ ಹಲ್ಲೆ ನಡೆಸಿದ್ದ. ರಕ್ಷಣೆಗೆ ಹೋದ ತಾಯಿ ಹಾಗೂ ಸಂಬಂಧಿಕರ ಮೇಲೂ ಮಚ್ಚು ಬೀಸಿದ್ದʼ ಎಂದು ಹೇಳಲಾಗಿದೆ.

ʼಗಂಭೀರ ಹಲ್ಲೆಯಿಂದ ತೀವ್ರ ರಕ್ತಸ್ರಾವದಿಂದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಹಾಗೂ ಸಂಬಂಧಿಕರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News