ಕಟ್ಟಡ ನಿರ್ಮಿಸುವಾಗ ಒತ್ತುವರಿ ಬಗ್ಗೆ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ: ಹೈಕೋರ್ಟ್

Update: 2023-12-24 14:53 GMT

ಬೆಂಗಳೂರು: ಕಟ್ಟಡ ನಿರ್ಮಾಣದ ವೇಳೆ ಒತ್ತುವರಿಯ ಕುರಿತು ಯಾರಾದರೂ ದೂರು ನೀಡಿದರೆ ಅದರ ಬಗ್ಗೆ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಮಂಜೂರಾದ ನಕ್ಷೆಯ ಪ್ರಕಾರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪಾಲಿಕೆ ತನಿಖೆ ನಡೆಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಚೆನ್ನೈನ ಎಮರಾಲ್ಡ್ ಹೆವನ್ ಡೆವಲಪ್‍ ಮೆಂಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಬಿಬಿಎಂಪಿ ನ್ಯಾಯಾಂಗ ಪ್ರಾಧಿಕಾರವಲ್ಲ. ಹೀಗಾಗಿ, ಇಂತಹ ಪ್ರಕರಣಗಳಲ್ಲಿ ವ್ಯಾಜ್ಯದ ಬಗ್ಗೆ ವಿಚಾರಣೆ ನಡೆಸಲಾಗದು ಎಂದು ಆದೇಶಿಸಿದೆ.

ಒತ್ತುವರಿ ಬಗ್ಗೆ ಎಲ್ಲ ಅಂಶಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ನಕ್ಷೆ ಮಂಜೂರಾತಿ ಅಥವಾ ನಿಯಮ ಉಲ್ಲಂಘನೆಯಂತಹ ಪ್ರಕರಣಗಳು ಬಂದಾಗ ಅದರಲ್ಲಿ ಬಿಬಿಎಂಪಿ ಸಂಪೂರ್ಣ ಅಧಿಕಾರವಿದ್ದು, ಅದು ನಿಯಮದ ಪ್ರಕಾರ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಬಹುದು ಎಂದು ನ್ಯಾಯಪೀಠವು ಹೇಳಿದೆ. ಈ ವಿಚಾರದಲ್ಲಿ ಸಿವಿಲ್ ಕೋರ್ಟ್ ಏನಾದರೂ ಆದೇಶ ನೀಡಿದರೆ ಅದನ್ನು ಕಂಪೆನಿ ಪಾಲಿಸಬೇಕಾಗುತ್ತದೆ ಎಂದು ಪೀಠ ಆದೇಶಿಸಿದೆ.

ಪ್ರಕರಣವೇನು?: ಚೆನ್ನೈ ಮೂಲದ ಎಮರಾಲ್ಡ್ ಹೆವೆನ್ ಡೆವಲಪ್‍ ಮೆಂಟ್ ಲಿಮಿಟೆಡ್ ಕಂಪೆನಿ ಬೆಂಗಳೂರಿನ ಬೇಗೂರು ಹೋಬಳಿಯ ಬಸಾಪುರ ಗ್ರಾಮದಲ್ಲಿ ತನ್ನ ಜಾಗದಲ್ಲಿ ತಳಮಹಡಿ ಹೊರತುಪಡಿಸಿ 18 ಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡಿತ್ತು. ಆದರೆ, ಕವಿತಾ ಶಂಕರ್ ಎಂಬುವರು ತನ್ನ ಒಂದು ಎಕರೆ ಜಾಗವನ್ನು ಕಂಪೆನಿ ಒತ್ತುವರಿ ಮಾಡಿಕೊಂಡಿದೆ ಎಂದು ದೂರು ನೀಡಿದ್ದರು.

ಅದನ್ನು ಆಧರಿಸಿ 2023ರ ಸೆ.14ರಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರು ನೋಟಿಸ್ ನೀಡಿ, ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದರು.

ಆ ನೋಟಿಸ್ ಅನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಕಂಪೆನಿಯು ಭೂಮಿಯನ್ನು 2019ರಲ್ಲಿ ಖರೀದಿಸಲಾಗಿತ್ತು. ಅನಂತರ ಬಿಬಿಎಂಪಿಯಿಂದ ನಕ್ಷೆ ಅನುಮೋದನೆ ಪಡೆದ ನಂತರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿ ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಆರಂಭಿಸಲಾಗಿತ್ತು ಎಂದು ಹೇಳಿತ್ತು.

ಕವಿತಾ ಹಿಂದಿನ ಭೂ ಮಾಲಕರ ಕಡೆಯಿಂದ ಜಿಪಿಎ ಹೊಂದಿದ್ದಾರೆ. ಕಟ್ಟಡ ನಿರ್ಮಾಣ ಆರಂಭವಾದ ಬಳಿಕ ಒತ್ತುವರಿ ಮಾಡಿಕೊಳ್ಳಲಾಗಿದೆ, ತಾವು ಜಾಗದ ಮಾಲಕರು ಎಂದು ದಾವೆ ಹೂಡಿದ್ದಾರೆ. ಆದರೆ, ಬಿಎಂಪಿಗೆ ಒತ್ತುವರಿಯ ಬಗ್ಗೆ ತನಿಖೆ ನಡೆಸುವ ಯಾವುದೇ ಅಧಿಕಾರವಿಲ್ಲ, ಆ ಅಧಿಕಾರ ಸಿವಿಲ್ ಕೋರ್ಟ್‍ಗೆ ಮಾತ್ರ ಇದೆ ಎಂದು ಕಂಪೆನಿ ವಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News