ಛಲವಾದಿ ನಾರಾಯಣಸ್ವಾಮಿ ಇಂದು ಬಿಜೆಪಿ ಗರ್ಭಗುಡಿಯಲ್ಲಿದ್ದಾರೆ : ಬಿ.ಎಲ್.ಸಂತೋಷ್

Update: 2024-10-06 13:11 GMT

PC:x/@BJP4Karnataka

ಬೆಂಗಳೂರು : ‘ಈ ಹಿಂದೆ ಬಿಜೆಪಿಯನ್ನು ಟೀಕಿಸುತ್ತಿದ್ದ ಛಲವಾದಿ ನಾರಾಯಣಸ್ವಾಮಿ ಇಂದು ಪಕ್ಷದ ಗರ್ಭಗುಡಿಯಲ್ಲಿ ಕುಳಿತಿದ್ದಾರೆ. ಈ ಮೂಲಕ ದಲಿತರಿಗೆ ಬಿಜೆಪಿ ಗರ್ಭಗುಡಿ ಪ್ರವೇಶವಿಲ್ಲವೆಂಬ ವಿರೋಧಿಗಳ ಆರೋಪಕ್ಕೆ ತಕ್ಕ ಉತ್ತರ ಸಿಕ್ಕಂತಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ‘ಪರಿಶಿಷ್ಟ ಜಾತಿ, ಪಂಗಡ ಪದವೀಧರರ ಸಂಘ’ ವತಿಯಿಂದ ನಡೆದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಛಲವಾದಿ ನಾರಾಯಣಸ್ವಾಮಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿ ಬಂದು ಕುಳಿತಿದ್ದಾರೆ. ಬಿಜೆಪಿ ಆಡಳಿತ ಇರಲಿ, ಇಲ್ಲದಿರಲಿ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಲಿದೆ. ನಾರಾಯಣಸ್ವಾಮಿ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಬಿ.ಎಲ್.ಸಂತೋ‌ಷ್ ಆಶಿಸಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಟೀಕೆ ಮಾಡುತ್ತಾರೆ, ಅವರಿಗೆ ನನ್ನ ವಿರೋಧ ಇಲ್ಲ. ಬಿಜೆಪಿ ಅಂದ ತಕ್ಷಣ ವಿರೋಧ ಮಾಡುತ್ತಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು, ಆದರೂ ಅಲ್ಪಸಂಖ್ಯಾತರ ವಿರೋಧಿ ಅಂದರು. ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ, ಆದರೂ, ದಲಿತ ವಿರೋಧಿ ಅಂತಾರೆ. ಈಗ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಎಲ್ಲರೂ ಉತ್ತಮ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಬಿ.ಎಲ್. ಸಂತೋ‌ಷ್  ಹೇಳಿದರು.

ಅಂಬೇಡ್ಕರ್ ಅವರು ಹೇಳಿದ ಸಂಘಟನೆ, ಶಿಕ್ಷಣ ಒಟ್ಟಿಗೆ ಇದ್ದರೆ ಮಾತ್ರ ಬೆಳವಣಿಗೆ ಸಾಧ್ಯ. ಮೂರನೆಯದ್ದು ಸಂಘರ್ಷ ಅಂತ ಅಂಬೇಡ್ಕರ್ ಹೇಳಿದ್ದಾರೆ. ನ್ಯಾಯ ಸಿಗದಿದ್ದಾಗ ಸಂಘರ್ಷ ಅನಿವಾರ್ಯ ಅಂತ ಹೇಳಿದ್ದರು ಎಂದು ಬಿ.ಎಲ್.ಸಂತೋಷ್ ಸ್ಮರಿಸಿದರು.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಹಿಂದುಳಿದವರ ಪರ ಧ್ವನಿ ಎತ್ತಿ ಹೋರಾಟ ಮಾಡಿಕೊಂಡು ಬಂದಿರುವ ಛಲವಾದಿ ನಾರಾಯಣಸ್ವಾಮಿ ನಿಜಕ್ಕೂ ಅಭಿನಂದನಾರ್ಹರು. ಇದು ಅವರಿಗೆ ಅವಶ್ಯಕ ಕಾರ್ಯಕ್ರಮ. ಇಂದು ಹೋರಾಟದ ಕಿಚ್ಚು ನಶಿಸಿ ಹೋಗುತ್ತಿದೆ. ಇಂತಹ ಹೋರಾಟಗಾರರನ್ನು ಗುರುಸಿದ್ದೇವೆ ಎಂದರು.

ನಾನು ರಾಜ್ಯಾಧ್ಯಕ್ಷನಾದಾಗ ಪರಿಷತ್ ವಿಪಕ್ಷ ನಾಯಕನ ಸ್ಥಾನದ ಆಯ್ಕೆ ವಿಚಾರ ಬಂತು. ರಾಜ್ಯಾಧ್ಯಕ್ಷ ಹಾಗೂ ಯಡಿಯೂರಪ್ಪರ ಮಗನಾಗಿ ಯೋಚನೆ ಮಾಡಿದೆ. ರಾಷ್ಟ್ರೀಯಾಧ್ಯಕ್ಷ ನಡ್ಡಾರಿಗೆ ಕರೆ ಮಾಡಿ, ಹಲವಾರು ಹೆಸರುಗಳು ಬಂದಿವೆ. ಛಲವಾದಿ ನಾರಾಯಣಸ್ವಾಮಿ ಎನ್ನುವ ಹೋರಾಟಗಾರ ಇದ್ದಾರೆ. ತುಳಿತಕ್ಕೊಳಗಾದ ಸಮುದಾಯದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಅಭಿಪ್ರಾಯ ತಿಳಿಸಿದೆ. ಈ ರೀತಿ ಆಲೋಚನೆ ಮಾಡಿದ್ದಕ್ಕೆ ನಡ್ಡಾ ಖುಷಿಪಟ್ಟರು. ಈಗ ಛಲವಾದಿ ನಾರಾಯಣಸ್ವಾಮಿ ಪರಿಷತ್ ವಿಪಕ್ಷ ನಾಯಕರಾಗಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜಕೀಯ ಅಂದರೆ ಹಣ ಬಲ, ಜನ ಬಲ, ಬಾಹುಬಲ ಇರಬೇಕು. ಯಾವುದೂ ನನಗೆ ಇರಲಿಲ್ಲ. ನನ್ನ ಕಾಲೇಜು ದಿನದಲ್ಲಿ ಬಸವಲಿಂಗಪ್ಪ ಹಾಗೂ ದಿವಂಗತ ಬಂಗಾರಪ್ಪ ಅವರ ಪರಿಚಯ ಆಯಿತು. ಬಂಗಾರಪ್ಪ ನನ್ನನ್ನು ಬಹಳ ಹತ್ತಿರಕ್ಕೆ ಕರೆದುಕೊಂಡರು. ಹಾಗಾಗಿ ನಾನು ಕಾಂಗ್ರೆಸ್‍ನವನೇ ಆಗಿಹೋಗಿದ್ದೆ. 40 ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿ ಜೀತ ಮಾಡಿದೆವು ಎಂದರು.

ನನ್ನ ಹೆಸರು ತಿಮ್ಮಯ್ಯ ನಾರಾಯಣಸ್ವಾಮಿ ಅಷ್ಟೇ. ಅನಂತರ ಛಲವಾದಿ ನಾರಾಯಣಸ್ವಾಮಿ ಎಂಬುದು ಸೇರಿಕೊಂಡಿತು. ನಾವು ತಳಸಮುದಾಯದವರು. ಹಿರಿಯರ ಜೊತೆ ಚರ್ಚಿಸಿ ಛಲವಾದಿ ಅನ್ನೋದನ್ನು ಸ್ಥಾಪನೆ ಮಾಡಿಕೊಂಡೆವು. ನಾನು ಎಂದೂ ಜಾತಿವಾದಿ ಅಲ್ಲ. ಛಲವಾದಿ ಅಂದ್ರೆ ಹೋರಾಟ ಅಂತ. ಇದಕ್ಕೆ ಅನ್ವಯ ಆಗುವವರು ಎಲ್ಲರೂ ಛಲವಾದಿಗಳೇ ಎಂದು ಅವರು ತಿಳಿಸಿದರು.

ಇತ್ತೀಚೆಗೆ ನನಗೆ ಧಮ್ ಬಿರಿಯಾನಿ ನಾರಾಯಣಸ್ವಾಮಿ ಅಂತ ಹೆಸರು ಕೊಟ್ಟರು. ಕಾಂಗ್ರೆಸ್‍ನಲ್ಲಿ ನನಗೆ ಮೂರು ಬಾರಿ ಅಲ್ಲ, ಏಳು ಬಾರಿ ಟಿಕೆಟ್ ತಪ್ಪಿಸಿದ್ದಾರೆ. ನಾನು ಎಂದೂ ಕೆಲಸಕ್ಕೆ ಅರ್ಜಿ ಹಾಕಿದವನಲ್ಲ. ನಾನೂ ಕೂಡ ನಿಮ್ಮ ಹಾಗೆ ಬಿಜೆಪಿ ಬ್ರಾಹ್ಮಣರ ಪಕ್ಷ, ಗರ್ಭಗುಡಿಗೆ ಬಿಡಲ್ಲ ಅಂತ ಬೈದಿದ್ದೆ. ನಾನು ಬಿಜೆಪಿಯನ್ನು ಪ್ರೀತಿಸಿ ಬರಲಿಲ್ಲ. ಕಾಂಗ್ರೆಸ್ ಮೇಲಿನ ಕೋಪಕ್ಕೆ ಬಿಜೆಪಿಗೆ ಬಂದೆ. ಇಲ್ಲಿ ಬಂದ ಮೇಲೆ ಯೋಗ್ಯತೆ ಗುರುತಿಸಿ ಪದವಿ ಕೊಟ್ಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಎನ್.ಮಹೇಶ್, ಎಸ್‍ಎಸ್‍ಡಿ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ವಿವಿಧ ಮಠಗಳ ಸಿದ್ದರಾಮ ಬೆಲ್ದಾಳ ಸ್ವಾಮೀಜಿ, ಜ್ಞಾನಯೋಗಿ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿ ಶರಣರು, ಸೇವಾಲಾಲ್ ಶ್ರದ್ಧಾ ಸ್ವಾಮೀಜಿ ಸೇರಿ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News