ಚೈತ್ರಾ ಪ್ರಕರಣ ಕೇವಲ ಆರ್ಥಿಕ ವಂಚನೆಯಲ್ಲ, ಸಾಮಾಜಿಕ ಹಗರಣ: ಮುನೀರ್ ಕಾಟಿಪಳ್ಳ

Update: 2023-09-20 16:48 GMT

ಬೆಂಗಳೂರು, ಸೆ.20: ‘ಚೈತ್ರಾ ಕುಂದಾಪುರ ಮತ್ತು ಸಂಗಡಿಗರ ಪ್ರಕರಣ ತೀರಾ ಸಾಮಾನ್ಯವಾದಂತಹ ಆರ್ಥಿಕ ವಂಚನೆಯಲ್ಲ, ಇದೊಂದು ಸಾಮಾಜಿಕವಾದ ಹಗರಣ. ಸರಕಾರ ನ್ಯಾಯಯುತ ತನಿಖೆ ಕೈಗೊಂಡು ಈ ರೀತಿಯ ಹಗರಣಗಳಿಗೆ ಕಡಿವಾಣ ಹಾಕಬೇಕು’ ಎಂದು ಪ್ರಗತಿಪರ ಹೋರಾಟಗಾರ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಬುಧವಾರ ನಗರದ ಕೆ.ಆರ್.ವೃತ್ತದಲ್ಲಿರುವ ಅಲುಮ್ನಿ ಸಭಾಂಗಣದಲ್ಲಿ ಚೈತ್ರಾ ಕುಂದಾಪುರ ಬಿಜೆಪಿ ಎಂಎಲ್‍ಎ ಟಿಕೆಟ್ ಹಗರಣದ ದಿಕ್ಕುದೆಸೆ, ಆಳ ಅಗಲದ ಕುರಿತು ನಡೆದ ಆಗ್ರಹ ಸಭೆಯಲ್ಲಿ ಮಾತನಾಡಿದ ಅವರು, ‘ಬಲಪಂಥೀಯರ ದ್ವೇಷ ರಾಜಕಾರಣದ ಬಗ್ಗೆ ಈ ಪ್ರಕರಣ ದೇಶದ ಜನತೆಯ ಕಣ್ಣು ತೆರೆಸುತ್ತಿದೆ. ಸಂಘಪರಿವಾರದ ದ್ವೇಷ ಭಾಷಣದ ಕಾರ್ಖಾನೆಯಲ್ಲಿ ಉದ್ಬವವಾಗುವ ಬಹುತೇಕರು ಈ ರೀತಿ ವಂಚನೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

ಇದು ಕೇವಲ ಗೋವಿಂದ ಬಾಬು ಪೂಜಾರಿಗೆ ಮಾತ್ರ ಮಾಡಿದ ವಂಚನೆಯಲ್ಲ, ಚುನಾವಣೆ ವೇಳೆ ಅನೇಕ ತೆರೆಮರೆಯ ವಂಚನೆಗಳು ನಡೆದಿದ್ದು, ಅನೇಕರು ವಂಚನೆಗೆ ಒಳಗಾಗಿದ್ದಾರೆ. ಅವೆಲ್ಲವನ್ನೂ ತನಿಖೆ ಮೂಲಕ ಬಹಿರಂಗ ಪಡಿಸಬೇಕು. ಸರಕಾರದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಈ ಪ್ರಕರಣದ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ಪ್ರಕರಣದ ಬಗ್ಗೆ ಮೂರು ತಿಂಗಳ ಮೊದಲೇ ಗೊತ್ತಿದ್ದಾಗ, ಅವರು ಏಕೆ ಬಹಿರಂಗ ಪಡಿಸಲಿಲ್ಲ, ಗೋವಿಂದ ಬಾಬು ಪೂಜಾರಿ ಸಿ.ಟಿ.ರವಿಯವರಿಗೆ ಯಾಕೆ ಕರೆ ಮಾಡಿದ್ದರು. ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನವೇ ಎಂದು ಪ್ರಶ್ನಿಸಿದರು.

ಹಿರಿಯ ವಕೀಲ ಕೆ.ಬಾಲನ್ ಮಾತನಾಡಿ, ಬಿಜೆಪಿಯೆಂದರೆ ಬಿಸಿನೆಸ್ ಜನತಾ ಪಾರ್ಟಿ. ಇಲ್ಲಿ ಎಲ್ಲವೂ ಪ್ರಾಯೋಜಿತ ವ್ಯವಹಾರಿಕವಾಗಿ ನಡೆಯುತ್ತದೆ. ಬಿಜೆಪಿಯ ಕ್ರಿಮಿನಲ್ ಗ್ಯಾಂಗ್‍ನ ಚಟುವಟಿಕೆಗಳು ಒಂದೊಂದಾಗಿ ಬಯಲಾಗುತ್ತಿವೆ. ವಂಚನೆ ಪ್ರಕರಣದಲ್ಲಿ ಬಿಜೆಪಿ ಪ್ರಮುಖ ನಾಯಕರ ಹೆಸರು ಕೇಳಿಬರುತ್ತಿದೆ. ಅಧಿಕಾರಿಗಳು ಎಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಬೇಕು ಎಂದರು.

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಪುನೀತ್ ಕೆರೆಹಳ್ಳಿ ಎಂಬ ಸಂಘಪರಿವಾರದ ಕಾರ್ಯಕರ್ತನ ಬಿಡುಗಡೆಯಲ್ಲಿ ಸರಕಾರದೊಳಗಿನ ಹಿಂದುತ್ವ ಕೆಲಸ ಮಾಡಿದೆ. ಇದರಿಂದ ಆರೆಸ್ಸೆಸ್‍ನ ನಿಜವಾದ ನೀಚತನ ಬಯಲಾಗುತ್ತಿದೆ ಎಂದರು.

ಚಿಂತಕಿ ಕೆ.ಎಸ್.ವಿಮಲಾ ಮಾತನಾಡಿ, ಈ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಕೇವಲ ಅಸ್ತ್ರವಷ್ಟೇ. ಇದರಲ್ಲಿ ಹಲವು ಕಾಣದ ಕೈಗಳಿವೆ. ನಾವು ಅವೆಲ್ಲವನ್ನೂ ಹೊರತೆಗೆದು ಬುಡಮೇಲು ಮಾಡಬೇಕಾಗಿದೆ. ಇದಕ್ಕೆ ಸರಕಾರವನ್ನು ಆಗ್ರಹಿಸುವ ಅನಿರ್ವಾಯತೆ ಇದೆ ಎಂದರು.

ಸಾಮಾಜಿಕ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ಮಾತನಾಡಿ, ಹಿಂದುತ್ವದ ಹಣೆಪಟ್ಟಿ ಕಟ್ಟಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದ ಪುನೀತ್ ಕೆರೆಹಳ್ಳಿಯನ್ನು ಬಿಡುಗಡೆ ಮಾಡಿದ್ದು ಬಹಳಷ್ಟು ನೋವುಂಟು ಮಾಡಿದೆ. ಕಾಂಗ್ರೆಸ್ ಸರಕಾರ ಸಮಾಜವನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇತ್ತು. ಆದರೆ ಜನರ ನಂಬಿಕೆಯ ವಿರುದ್ಧದ ಕೆಲಸವಾಗುತ್ತಿದೆ. ಚೈತ್ರ ಪ್ರಕರಣದ ವಿರುದ್ಧವೂ ಇದೇ ರೀತಿಯಾಗಲು ಬಿಡುವುದಿಲ್ಲ. ರಾಜ್ಯ ಸರಕಾರವನ್ನು ವಸ್ತುನಿಷ್ಟ ತನಿಖೆಗೆ ಆಗ್ರಹಿಸುತ್ತೇವೆ. ಸರಿಯಾದ ತನಿಖೆ ನಡೆಯದಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧ ಎಂದರು.

ಪ್ರಗತಿಪರ ಚಿಂತಕ ಸೂರ್ಯ ಮುಕುಂದರಾಜ್ ಮಾತನಾಡಿ, ‘ಎಬಿವಿಪಿ, ಭಜರಂಗದಳಕ್ಕೆ ಸೇರುವ ಯುವಕರನ್ನು ತಡೆಯಬೇಕು. ಏಕೆಂದರೆ ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸಿ ಕ್ರಿಮಿನಲ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಸ್ವಾಸ್ಥ ಸಮಾಜವನ್ನು ಊಹಿಸಲೂ ಅಸಾಧ್ಯ ಸ್ಥಿತಿ ಉಂಟಾಗಬಹುದು ಎಂದರು.

ಚಿಂತಕ ಸಿರಿಮನೆ ನಾಗರಾಜ್ ಮಾತನಾಡಿ, ಸರಕಾರ ಸಂಘಪರಿವಾರದ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಸಂಘಪರಿವಾರದ ನಾಯಕರ ಮೇಲೆ ಎಫ್‍ಐಆರ್ ದಾಖಲಾಗುತ್ತಿದೆಯೇ ಹೊರತು, ಬಂಧನವಾಗುತ್ತಿಲ್ಲ. ಚೈತ್ರ ಪ್ರಕರಣದ ಜಾಲಗಳನ್ನು ನೋಡಿದರೆ ಇದು ಇನ್ನೂ ದೊಡ್ಡದಿದೆ ಎಂಬ ಅನುಮಾನವಿದೆ. ಈ ಹಗರಣದ ತನಿಖೆಗೆ ಸೂಕ್ತ ತನಿಖಾ ತಂಡದ ನೇಮಕವಾಗಬೇಕಿದೆ ಎಂದು ಹೇಳಿದರು. ಸಭೆಯಲ್ಲಿ ಚಿಂತಕರಾದ ಶಿವಸುಂದರ್, ಹಾ.ರಾ.ಮಹೇಶ್, ಸುರೇಂದ್ರ ರಾವ್, ನವೀನ್ ಸೂರಿಂಜೆ ಸೇರಿದಂತೆ ಹಲವರು ಭಾಗವಹಿಸಿದ್ದರು.

 

ಬಿಜೆಪಿ ಆಡಳಿತಾವಧಿಯ ತನಿಖೆಯಾಗಲಿ: ‘ದೇಶ ಭಕ್ತಿ ಮತ್ತು ಸೇವೆಯ ಹೆಸರಿನಲ್ಲಿ ಬಿಜೆಪಿ ಭಾರತವನ್ನು ಲೂಟಿ ಮಾಡಲು ಹೊರಟಿದೆ. ಭೂಮಿ ಹೊಡೆದುಕೊಳ್ಳುವುದು, ಶಿಕ್ಷಣ ಸಂಸ್ಥೆಗಳನ್ನು ಲೂಟಿ ಮಾಡುವುದು ಬಿಜೆಪಿಯವರ ಕಸುಬಾಗಿದೆ. ಈ ಹಿಂದಿನ ಬಿಜೆಪಿ ಆಡಳಿತಾವಧಿಯನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು. ಇದಕ್ಕೆ ರಾಜ್ಯ ಸರಕಾರ ಒಂದು ತನಿಖಾ ತಂಡವನ್ನು ರಚಿಸಿ ಹಳ್ಳ ಹಿಡಿಯದಂತೆ ಇದರ ತನಿಖೆಯಾಗಬೇಕು’

-ಮಾವಳ್ಳಿ ಶಂಕರ್, ದಲಿತ ಮುಖಂಡ

ದ್ವೇಷ ಭಾಷಣ ಮಾಡಿ ಜನರ ನಡುವೆ ಒಡಕನ್ನು ಉಂಟುಮಾಡುವ ಶಕ್ತಿಗಳ ವಿರುದ್ಧ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಸಮಾನ ಮನಸ್ಕರೆಲ್ಲರೂ ಸರಕಾರ ವಿರುದ್ಧ ಸೈದ್ಧಾಂತಿಕ ಹಾಗೂ ವೈಚಾರಿಕ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News