ನಕ್ಸಲ್ ನಿಗ್ರಹ ಪಡೆ ಯಶಸ್ವಿ ಕಾರ್ಯಾಚರಣೆ : 22 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಘೋಷಣೆ
ಬೆಂಗಳೂರು : ರಾಜ್ಯದ ಮತ್ತು ನೆರೆ ರಾಜ್ಯದ ನಕ್ಸಲರು ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಕರೆತರಲು ಯಶಸ್ವಿ ಕಾರ್ಯಾಚರಣೆ ಕೈಗೊಂಡ ರಾಜ್ಯ ಗುಪ್ತ ವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್ ಸೇರಿದಂತೆ 22 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ 2024ನೆ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.
ರಾಜ್ಯ ಗುಪ್ತ ವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್, ಭದ್ರತೆ ಹೆಚ್ಚುವರಿ ನಿರ್ದೇಶಕ ಡಾ.ವೈ.ಎಸ್.ರವಿಕುಮಾರ್, ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್, ರಾಜ್ಯ ಗುಪ್ತವಾರ್ತೆ ಜಂಟಿ ನಿರ್ದೇಶಕ ಸುದೀರ್ ಕುಮಾರ್ ರೆಡ್ಡಿ, ಉಪನಿರ್ದೇಶಕ ಹರಿರಾಮ್ ಶಂಕರ್, ನಕ್ಸಲ್ ನಿಗ್ರಹ ಪಡೆ ಪೊಲೀಸ್ ಅಧೀಕ್ಷಕ ಜಿತೇಂದ್ರ ದ್ಯಾಮ, ಸಹಾಯಕ ನಿರ್ದೇಶಕ ಸಿ.ವಿ.ದೀಪಕ್.
ನಕ್ಸಲ್ ನಿಗ್ರಹ ಪಡೆ ಪೊಲೀಸ್ ಉಪಾಧೀಕ್ಷಕ ರಾಘವೇಂದ್ರ ಆರ್.ನಾಯಕ್, ಮುಖ್ಯ ಗುಪ್ತಚರ ಅಧಿಕಾರಿ ಪ್ರಕಾಶ್ ಬಿ.ಕರಿಗಾರ, ನಕ್ಸಲ್ ನಿಗ್ರಹ ಪಡೆ ಇನ್ಸ್ಪೆಕ್ಟರ್ ಸತೀಶ್, ಅಧಿಕಾರಿಗಳಾದ ಕಲ್ಲಪ್ಪ ಎಚ್.ಆತನೂರ, ದಿನೇಶ್ ಕುಮಾರ್ ಶೆಟ್ಟಿ, ಸಹಾಯಕ ಗುಪ್ತಚರ ಅಧಿಕಾರಿಗಳಾದ ಎಸ್.ಆರ್.ಚಂದ್ರಶೇಖರ್, ಮಹೇಶ್ ಹೆಗಡೆ, ಬಿ.ಎಸ್.ಗಿರೀಶ್, ಹಿರಿಯ ಗು.ಸಹಾಯಕ ರಾಮೇಶ್ ರಾವು, ನವೀನ್, ದಿಲೀಪ್, ಮುಖ್ಯಪೇದೆ ರಾಘವೇಂದ್ರ, ಪೇದೆಗಳಾದ ಸೋಮಲಿಂಗ, ಬಸವರಾಜ ಕೆ.ಎಚ್., ಶೇಷಾದ್ರಿ ಅವರು 2024ನೆ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ರಾಜ್ಯದ ಮತ್ತು ನೆರೆ ರಾಜ್ಯದ ನಕ್ಸಲರು ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಕರೆತರಲು ರಾಜ್ಯ ಗುಪ್ತವಾರ್ತೆ ಘಟಕ ಹಾಗೂ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಪಾತ್ರ ಗಮನಾರ್ಹವಾಗಿದ್ದು, ಈ ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.