ದಾವಣಗೆರೆ ಜಿಲ್ಲೆಯಲ್ಲಿ ಡೆಂಗಿ-ಚಿಕುನ್ ಗುನ್ಯಾ ಉಲ್ಬಣ

Update: 2023-10-07 16:56 GMT

ವರದಿ- ಎಚ್ ಎನ್ ಪ್ರಕಾಶ

ದಾವಣಗೆರೆ: ಜಿಲ್ಲೆಯಲ್ಲಿ ಡೆಂಗಿ ಮತ್ತು ಚಿಕುನ್ ಗುನ್ಯಾ ಪ್ರಕರಣಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದೆ. ಸೆಪ್ಟೆಂಬರ್ ತಿಂಗಳು ಒಂದರಲ್ಲೇ 61 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟೆಂಬರ್ ತಿಂಗಳವರೆಗೆ ಒಟ್ಟು 175 ಡೆಂಗ್ಯೂ ಪ್ರಕರಣಗಳು, 81 ಚಿಕುನ್ ಗೂನ್ಯಾ ಪ್ರಕರಣಗಳು ದೃಢಪಟ್ಟಿವೆ. ದಾವಣಗೆರೆ ತಾಲೂಕಿನಲ್ಲಿ 46, ಹರಿಹರ ತಾಲೂಕು 30, ಚನ್ನಗಿರಿ ತಾಲೂಕು 37, ಹೊನ್ನಾಳಿ ತಾಲೂಕು 35, ಜಗಳೂರು ತಾಲೂಕು 27 ಸೇರಿ ಒಟ್ಟು 175 ಪ್ರಕರಣಗಳು ದಾಖಲಾಗಿವೆ.

ಡೆಂಗಿ ಜ್ವರದ ರೋಗ ಲಕ್ಷಣಗಳು:

ಡೆಂಗಿ ಜ್ವರ ಉಂಟಾದ ತಕ್ಷಣದಲ್ಲಿ ಮಕ್ಕಳು ಅಥವಾ ದೊಡ್ಡವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗ ಲಕ್ಷಣಗಳು ದಿನ ಕಳೆದಂತೆ ಅಂದರೆ ನಾಲ್ಕರಿಂದ ಏಳು ದಿನಗಳ ನಂತರ ಕಾಣಿಸಿಕೊಳ್ಳಲು ಮತ್ತು ಉಲ್ಬಣಗೊಳ್ಳಲು ಪ್ರಾರಂಭವಾಗುತ್ತವೆ. ತಲೆನೋವ, ಮೈಕೈ ನೋವು, ಕೀಲುನೋವು,ವಾಕರಿಕೆ, ವಾಂತಿ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳ ದೇಹದ ಮೇಲೆ ಅಲ್ಲಲ್ಲಿ ಕಲೆಗಳು ಇರುತ್ತವೆ. ಕೂಡಲೇ ಸಮೀಪದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದರೆ, ಕಾಯಿಲೆ ಬೇಗ ವಾಸಿ ಆಗುತ್ತದೆ.

ಡೆಂಗಿ ಜ್ವರದ ನಿವಾರಣೆ:

ಸುಮಾರು 9 ವರ್ಷದ ಮಕ್ಕಳಿಂದ ಹಿಡಿದು 45 ವರ್ಷದ ವಯಸ್ಸಿನವರೆಗೂ ಎದುರಾದ ಡೆಂಗಿ ಸೋಂಕಿಗೆ ಲಸಿಕೆ ಈಗಾಗಲೇ ಲಭ್ಯವಿದ್ದು, ಹೆಚ್ಚಾಗಿ ಡೆಂಗ್ಯೂ ಜ್ವರ ಕಂಡು ಬರುವ ಪ್ರದೇಶಗಳಲ್ಲಿ ಒಂದು ವರ್ಷದಲ್ಲಿ ಮೂರು ಬಾರಿಯಂತೆ ಕೊಡಲಾಗುತ್ತದೆ. ಇದರ ಪ್ರಭಾವದಿಂದ ಡೆಂಗ್ಯೂ ಜ್ವರ ಉಂಟಾಗುವ ಸಂಭವ ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಡೆಂಗ್ಯೂ ಜ್ವರದ ಸೋಂಕಿನಿಂದ ಪಾರಾಗಲು ಹೆಚ್ಚಾಗಿ ಗಾಳಿ ಮತ್ತು ಬೆಳಕಿನ ವಾತಾವರಣ ತುಂಬಿರುವ ಪ್ರದೇಶದಲ್ಲಿ ವಾಸ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಇರುವ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳುವುದರ ಮುಖಾಂತರ ಡೆಂಗ್ಯೂ ಸೊಳ್ಳೆಗಳಿಗೆ ಕಡಿವಾಣ ಹಾಕಬಹುದು.

ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಡೆಂಗ್ಯೂ ಸೊಳ್ಳೆಗಳು ಕಚ್ಚುವುದರಿಂದ ಸೊಳ್ಳೆ ಪರದೆಗಳ ಬಳಕೆ ಇದ್ದರೆ ಒಳ್ಳೆಯದು. ಸಾಧ್ಯವಾದಷ್ಟು ಮೈತುಂಬ ಬಟ್ಟೆ ತೊಟ್ಟು ಮನೆಯಿಂದ ಹೊರಗಡೆ ಹೋಗತಕ್ಕದ್ದು.

ಮನೆಯಲ್ಲಿರುವಾಗ ಮಸ್ಕಿಟೋ ರೆಪೆಲ್ಲೆಂಟ್ ಬಳಸುವುದು ಒಳ್ಳೆಯದು. ನಿಮ್ಮ ಬಟ್ಟೆಗಳಿಗೆ, ಬೂಟುಗಳಿಗೆ ಮತ್ತು ನೀವು ಬಳಸುವ ಇನ್ನಿತರ ವಸ್ತುಗಳಿಗೆ ಪೆರ್ಮೆಥ್ರಿನ್ ಸಿಂಪಡಿಸುವುದು ವಾಸಿ. ಮಾರುಕಟ್ಟೆಗಳಲ್ಲಿ ಸಹ ಪೆರ್ಮೆಥ್ರಿನ್ ಮೊದಲೇ ಬಳಸಿರುವ ಬಟ್ಟೆಗಳು ಲಭ್ಯವಾಗುತ್ತವೆ. ಅವುಗಳ ಬಳಕೆಯನ್ನು ಹೆಚ್ಚಿಸಿಕೊಳ್ಳಬಹುದು.

ʼಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಆರೋಗ್ಯ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳಿಂದ ಲಾರ್ವಾ ಸರ್ವೆ ಮಾಡಿಸಿ ಆರೋಗ್ಯದ ಅರಿವು ಮೂಡಿಸಲಾಗುತ್ತದೆʼ

-ಡಾ.ನಟರಾಜ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

---------------------------------------------------------------

ಡೆಂಗ್ಯೂ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ‌ಕೈಗೊಳ್ಳಲಾಗಿದೆ.ಈಗಾಗಲೇ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಭೆ ನಡೆಸಿದ್ದು ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.

-ಡಾ.ಷಣ್ಮುಖಪ್ಪ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದಾವಣಗೆರೆ

------------------------------------------------------

ʼಡೆಂಗ್ಯೂ ನಿಯಂತ್ರಣ ಮಾಡಲು ನೀರಿನ ತೊಟ್ಡಿ ,ಡ್ರಮ್ ,ಬ್ಯಾರಲ್, ಏರಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ʼ

-ಅಂಜಿನಪ್ಪ ಎಂ, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ದಾವಣಗೆರೆ

-ಡಾ.ಷಣ್ಮುಖಪ್ಪ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದಾವಣಗೆರೆ



-ಅಂಜಿನಪ್ಪ ಎಂ, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ದಾವಣಗೆರೆ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News