ಬಿಜೆಪಿಯಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೂ ನೂರಾರು ಕೋಟಿ ರೂ. ಕೊಡಬೇಕಾದ ಪರಿಸ್ಥಿತಿ ಇದೆ: ಸಚಿವ ಎಂ.ಬಿ ಪಾಟೀಲ್

Update: 2023-07-08 10:24 GMT

ವಿಜಯಪುರ: 'ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಲ್ಲ. ಹಿಂದೆ ಅವರ ಸರಕಾರವಿದ್ದಾಗ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ನಿಗದಿಪಡಿಸಿದ್ದರು. ಬಹುಶಃ ಈಗ ಅವರ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೂ ನೂರಾರು ಕೋಟಿಗಳನ್ನು ಕೊಡಬೇಕಾದ ಪರಿಸ್ಥಿತಿ ಇರಬಹುದು' ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದ್ದಾರೆ. 

ಶನಿವಾರ ಇಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ''ನಮ್ಮ ಸರಕಾರವು ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿರುವುದು ಅವರ ಘನತೆಗೆ ತಕ್ಕನಾಗಿಲ್ಲ. ಒಬ್ಬ ಕೇಂದ್ರ ಸಚಿವರಾಗಿ ಅವರು ಹೀಗೆಲ್ಲ ಮಾತನಾಡಬಾರದು. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಇವೆಲ್ಲವೂ ಇರುವುದು ಬಡವರ ಒಳಿತಿಗಾಗಿಯೇ ವಿನಾ ಶ್ರೀಮಂತರಿಗಲ್ಲ ಎನ್ನುವುದನ್ನು ಅವರು ಅರಿಯಬೇಕು'' ಎಂದು ಹೇಳಿದರು.

''ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣದ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅಗತ್ಯವಿರುವ 70 ಕೋಟಿ ರೂ. ಹಣವನ್ನು ಸದ್ಯದಲ್ಲೇ ಒದಗಿಸಲಾಗುವುದು. ಜತೆಗೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಈ ವರ್ಷವೇ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಲಾಗುವುದು'' ಎಂದು ತಿಳಿಸಿದರು. 

"ವಿಮಾನ ನಿಲ್ದಾಣ ಕಾಮಗಾರಿಗೆ ನಿಯಮಗಳ ಪ್ರಕಾರ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಟೆಂಡರ್ ಕರೆಯಬೇಕಿತ್ತು. ಆದರೆ, ಹಿಂದಿನ ಬಿಜೆಪಿ ಸರಕಾರವು ಇದನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಲೋಪವೆಸಗಿದೆ. ಇದನ್ನು ನಾನು ಬೆಳೆಸಲು ಹೋಗುವುದಿಲ್ಲ. ವಿಮಾನ ನಿಲ್ದಾಣ ಕಾಮಗಾರಿಗೆ ಯಾವುದೇ ಅಡೆತಡೆ ಇಲ್ಲದೆ ನಡೆಯುವಂತೆ ನೋಡಿಕೊಳ್ಳಲಾಗುವುದು. ಅಗತ್ಯವಿರುವ ಹಣದ ಸಂಬಂಧ ಈಗಾಗಲೇ ಕಡತವನ್ನು ಸಿದ್ಧ ಮಾಡಿ, ಮುಂದಿನ ಹಂತಕ್ಕೆ ಕಳಿಸಲಾಗಿದೆ" ಎಂದರು.

ವಿಜಯಪುರವನ್ನು ತಯಾರಿಕಾ ವಲಯದ ಕೈಗಾರಿಕೆಗಳ ಹಬ್‌‌ ಆಗಿ ಅಭಿವೃದ್ಧಿಪಡಿಸಲಾಗುವುದು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲೇ ಹೇಳಿದ್ದಾರೆ. ಜತೆಗೆ ಇಲ್ಲಿ ವೈನ್‌ ಪಾರ್ಕ್ ಮತ್ತು ಫುಡ್‌ ಪಾರ್ಕ್ ಎರಡೂ ಮಂಜೂರಾಗಿದೆ. ಆದರೆ ಇವುಗಳಲ್ಲಿ ಶೀತಲಗೃಹ ಸೇರಿದಂತೆ ಒಂದೇ ರೀತಿಯ ಸೌಲಭ್ಯಗಳಿರುತ್ತವೆ. ಇವುಗಳನ್ನು ಸಮನ್ವಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಸಿದ್ದರಾಮಯ್ಯನವರು ಇದೇ ಮೊದಲ ಬಾರಿಗೆ ವಿತ್ತೀಯ ಕೊರತೆಯ ಬಜೆಟ್‌ ಮಂಡಿಸಬೇಕಾಗಿ ಬಂದಿದೆ. ಹಿಂದಿನ ಸರಕಾರವು ಆರ್ಥಿಕ ಶಿಸ್ತನ್ನು ಉಲ್ಲಂಘಿಸಿ ನೀರಾವರಿ, ಲೋಕೋಪಯೋಗಿ ಮುಂತಾದ ಇಲಾಖೆಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಟೆಂಡರ್ ಕರೆದಿದ್ದೇ ಇದಕ್ಕೆ ಕಾರಣವಾಗಿದೆ. ಆದರೂ ರಾಜ್ಯದ ಬೊಕ್ಕಸವನ್ನು ತುಂಬಿಸಲು ಅವರು ಹಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದರ ಜತೆಗೆ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಕೊಡಲಾಗಿದೆ. ಇದರಲ್ಲಿ ಪ್ರಸ್ತುತ ಆರ್ಥಿಕ ವರ್ಷದ ಬಾಕಿ ಅವಧಿಗೆ 36 ಸಾವಿರ ಕೋಟಿ ರೂ. ಅಗತ್ಯವಿದ್ದು, ಇದನ್ನು ಒದಗಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News