ನೀವು ಕಾರ್ಯಕರ್ತರು, ಮತದಾರರ ಮನಗೆಲ್ಲಿ, ನಾವು ನಾಯಕರುಗಳನ್ನು ನಿಭಾಯಿಸುತ್ತೇವೆ: ಡಿ.ಕೆ.ಶಿವಕುಮಾರ್

Update: 2023-08-21 17:30 GMT

ಬೆಂಗಳೂರು, ಆ.21: ನೀವು ಕಾರ್ಯಕರ್ತರು, ಮತದಾರರ ಮನ ಗೆಲ್ಲುವತ್ತ ಗಮನ ಹರಿಸಿ. ನಾಯಕರ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದ್ದಾರೆ.

ಸೋಮವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ್ ಆಪ್ತರು ಮತ್ತು ಜೆಡಿಎಸ್‌ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆಶಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಕರ್ನಾಟಕದ ಜನರ ಬದುಕನ್ನು ರೂಪಿಸುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳು ತಲುಪದ ಜನರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಲು ಭಾರತ್ ಜೋಡೋ ಸಭಾಂಗಣದಲ್ಲಿ ನಾವೆಲ್ಲಾ ಜೊತೆಯಾಗಿದ್ದೇವೆ. ನಾವುಗಳು ಗಟ್ಟಿಯಾಗಿ ಕೋಮುವಾದಿ ಶಕ್ತಿಗಳನ್ನು ಓಡಿಸೋಣ ಎಂದು ಡಿಕೆಶಿ ಅವರು ತಿಳಿಸಿದರು.

ಜನ ನೆನಪು ಮಾಡಿಕೊಳ್ಳುವಂತಹ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ ಬಿಜೆಪಿ. ಬರೀ ಬೆಲೆ ಏರಿಕೆ ಭಾಗ್ಯ ಕೊಟ್ಟಿದೆ. ಬಡವರ ಬಗ್ಗೆ ಚಿಂತೆ ಇಲ್ಲ, ಎಲ್ಲ ಪೆಟ್ರೋಲ್ ಬಂಕ್‍ಗಳಲ್ಲಿ ಮೋದಿಯವರು ಗ್ಯಾಸ್ ಕೊಡುತ್ತೇನೆ ಎಂದು ಬಡ ಹೆಣ್ಣು ಮಕ್ಕಳ ಫೋಟೊ ಹಾಕಿದ್ದಷ್ಟೇ ಸಾಧನೆ. ಇದೇ ಕಾರಣಕ್ಕೆ ನಾವು ಜನರಿಂದ ಮಾಡುತ್ತಿರುವ ಲೂಟಿಯನ್ನು ತಡೆಯಲು ಗ್ಯಾರಂಟಿ ಯೋಜನೆಗಳನ್ನು ತಂದಿರುವುದು. ನೀವು ಇದನ್ನು ಮನೆ, ಮನಗಳಿಗೆ ತಲುಪಿಸಿ.

ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಬೇಕು ಎಂದು ಇದೇ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಅವರು ಹಠ ಮಾಡಿ 40 ಜನ ಎಂಎಲ್‍ಎಗಳ ಸಹಿ ಹಾಕಿಸಿ ಕೊಟ್ಟಿದ್ದರು. ಅವರ ಕ್ಷೇತ್ರಗಳ ಜನರ ಮನೆಯ ಮೇಲೆ ಕಾಂಗ್ರೆಸ್ ಧ್ವಜದ ಚಿತ್ರಗಳನ್ನು ಹಾಕಿಸಿದ್ದರು. ಈಗ ಪೂರ್ತಿ ಕೇಸರಿ ಬಣ್ಣ ಬಳಿದಿದ್ದಾರೆ.

ಯುವ ಸಮಾವೇಶದ ಸಲುವಾಗಿ ದೆಹಲಿಗೆ ಹೋಗಿದ್ದಾಗ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಕಾಯುತ್ತಿದ್ದೆವು, ಅಲ್ಲಿಗೆ ಹಿರಿಯ ನಾಯಕರೊಬ್ಬರು ಬಂದರು, ಅವರನ್ನು ಸ್ವತಃ ರಾಜೀವ್ ಗಾಂಧಿ ಅವರೇ ಹೋಗಿ ಕರೆದುಕೊಂಡು ಬಂದರು. ನಾವೆಲ್ಲ ಯಾರು ಎಂದು ಕುತೂಹಲದಿಂದ ಕೇಳಿದೆವು. ಅವರು ಬಾಬು ಜಗಜೀವನ್ ರಾಮ್. ನೆಹರು, ಇಂದಿರಾ ಗಾಂಧಿ ಅವರ ಜೊತೆ ಕೆಲಸ ಮಾಡಿದವರು. ಅನಿವಾರ್ಯ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿದ್ದರು, ಈಗ ಪಕ್ಷಕ್ಕೆ ಮತ್ತೆ ಸೇರಬೇಕಂತೆ, ಕಾಂಗ್ರೆಸ್ಸಿಗನಾಗಿ ನಾನು ಪ್ರಾಣ ಬಿಡುವ ನನ್ನ ಆಸೆ ಎಂದು ಹೇಳಿದರಂತೆ ಈ ಘಟನೆ ಕೇಳಿದ ನಮಗೆ ಪಕ್ಷದಲ್ಲಿ ಇರುವ ನಾವೆಲ್ಲಾ ಪುಣ್ಯವಂತರು ಎಂದು ಅನಿಸಿತು ಎಂದು ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News