ಯಲಹಂಕ ಬಳಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ : ಈಶ್ವರ್ ಖಂಡ್ರೆ

Update: 2024-10-07 14:27 GMT

ಬೆಂಗಳೂರು : ಉತ್ತರ ಬೆಂಗಳೂರು ನಗರದಲ್ಲಿ ‘ಶ್ವಾಸತಾಣ’ (ಲಂಗ್ಸ್ ಸ್ಪೇಸ್)ದ ಕೊರತೆ ಇದ್ದು, ಯಲಹಂಕ ಆರ್‌ಟಿಓ ಕಚೇರಿ ಬಳಿ ಇರುವ ಮಾದಪ್ಪನಹಳ್ಳಿಯ 153 ಎಕರೆ ಅರಣ್ಯ ಭೂಮಿಯಲ್ಲಿ ಕಬ್ಬನ್ ಪಾರ್ಕ್ ಮಾದರಿಯಲ್ಲಿ ‘ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ’ಕ್ಕೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಸೋಮವಾರ ನಗರದ ಅರಣ್ಯ ಭವನದಲ್ಲಿ ಆಯೋಜಿಸಲಾಗಿದ್ದ ವನ್ಯಜೀವಿ ಸಪ್ತಾಹದ ಔಪಚಾರಿಕ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

153 ಎಕರೆ ಅರಣ್ಯ ಭೂಮಿಯನ್ನು, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಗುತ್ತಿಗೆ ನೀಡಲಾಗಿತ್ತು. ಈಗ ಗುತ್ತಿಗೆ ಅವಧಿ ಮುಗಿದಿದ್ದು, ಅರಣ್ಯ ಇಲಾಖೆ ಮತ್ತು ಸಿ.ಎಸ್.ಆರ್ ನಿಧಿಯ ನೆರವಿನೊಂದಿಗೆ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಒಂದು ಸಸ್ಯೋದ್ಯಾನ ಮಾಡಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದರು.

ಯಲಹಂಕ ಸುತ್ತುಮುತ್ತ ಬೆಂಗಳೂರು ವ್ಯಾಪಕವಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಇಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಸ್ಥಾಪಿಸಿದಲ್ಲಿ ಅದು ಅತ್ಯಂತ ಆಕರ್ಷಣೀಯ ತಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಬೆಂಗಳೂರು ನಗರವು ಭಾರತದಲ್ಲಿ ಮೂರನೇ ಅತಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ನಗರವಾಗಿದ್ದು, ಸುಮಾರು 89 ಚದರ ಕಿಲೋಮೀಟರ್‌ ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಬೆಂಗಳೂರಿನ ವೃಕ್ಷ ಹೊದಿಕೆ ಶೇ.6.81 ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 5 ಚದರ ಕಿಲೋಮೀಟರ್ ನಷ್ಟು ಹಸಿರು ಹೊದಿಕೆ ಕಡಿಮೆಯಾಗಿದೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯನ್ನು ಮರುಸ್ಥಾಪಿಸಲು ಇಲಾಖೆಯು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಇನ್ನು ಹೆಚ್ಚು ಹೆಚ್ಚಾಗಿ ಮಾಡಬೇಕಾಗಿದೆ. ಜೊತೆಗೆ ರಾಜಧಾನಿಯಲ್ಲಿ ಒತ್ತುವರಿಯಾಗಿರುವ ಅರಣ್ಯಭೂಮಿಯನ್ನು ಮರಳಿ ವಶಕ್ಕೆ ಪಡೆಬೇಕಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ವನ್ಯ ಜೀವಿಗಳನ್ನು ನೋಡಲೆಂದೇ ಅರಣ್ಯದಲ್ಲಿ ಸಫಾರಿಗೆ ಮತ್ತು ಮೃಗಾಲಯಗಳಿಗೆ ಜನರು ಹೋಗುತ್ತಾರೆ. ಸಫಾರಿಯಲ್ಲಿ ಹುಲಿ, ಚಿರತೆ, ಕರಡಿ, ಗರಿಬಿಚ್ಚಿ ನರ್ತಿಸುವ ನವಿಲು ಕಂಡರೆ ಮಂತ್ರಮುಗ್ಧರಾಗುತ್ತಾರೆ. ಅದೇ ವನ್ಯಜೀವಿಗಳು ಕಾಣದಿದ್ದರೆ ಬೇಸರಗೊಳ್ಳುತ್ತಾರೆ. ಮನಸ್ಸಿಗೆ ಇಷ್ಟು ಸಂತೋಷ, ಮುದ ನೀಡುವ ವನ್ಯ ಮೃಗಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ವನ್ಯ ಮೃಗಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜನರಲ್ಲಿ ಅರಿವು ಮೂಡಿಸಲು ಮುಂದಿನ ಪೀಳಿಗೆಗೆ ವನ್ಯ ಮೃಗಗಳ ಮಹತ್ವ ತಿಳಿಸಲು ಪ್ರತಿವರ್ಷ ಅ.2ರಿಂದ 8ರವರೆಗೆ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಹಾಗೂಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್, ಮುಖ್ಯ ವನ್ಯ ಜೀವಿ ಪರಿಪಾಲಕ ಸುಭಾಷ್ ಮಾಲ್ಖಡೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವನ್ಯಜೀವಿ ಛಾಯಾಚಿತ್ರ ಮತ್ತು ಅಂಚೆ ಚೀಟಿ ಪ್ರದರ್ಶನವನ್ನು ಈಶ್ವರ್ ಖಂಡ್ರೆ ವೀಕ್ಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News