ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನ್ಯಾಯ ಸಿಗಲಿ : ನಟ ಕಿಚ್ಚ ಸುದೀಪ್

Update: 2024-06-16 15:25 GMT

ಕಿಚ್ಚ ಸುದೀಪ್‌ \ ದರ್ಶನ್

ಬೆಂಗಳೂರು : ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಬೀದಿ ಹೆಣವಾಗಿದ್ದಕ್ಕೆ, ಆತನ ಹೆಂಡತಿಗೆ, ಮುಂದೆ ಹುಟ್ಟಿ ಬರುವ ಮಗುವಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ನಟ, ನಿರ್ದೇಶಕ ಕಿಚ್ಚ ಸುದೀಪ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ, ಮಾಧ್ಯಮದವರು, ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಂದರೆ ಅದಕ್ಕೆ ನಾನೂ ಬೆಂಬಲಿಸುತ್ತೇನೆ. ನಾನು ಯಾರ ಪರವಾಗಿಯೂ, ವಿರೋಧವಾಗಿಯೂ ನನ್ನ ಅಭಿಪ್ರಾಯ ವ್ಯಕ್ತಪಡಿಸಲ್ಲ ಎಂದರು.

ಮುಖ್ಯಮಂತ್ರಿಗಳು, ಮಾಧ್ಯಮಗಳು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಹಠವಿಡಿದು ಕುಳಿತು ಈ ಕೇಸಿನಲ್ಲಿ ನ್ಯಾಯ ಕೊಡಿಸಲು ಮುಂದಾಗಿದ್ದಾರೆ. ಅದಕ್ಕೆ ನಾವೆಲ್ಲರೂ ಬೆಂಬಲಿಸಬೇಕಿದೆ ಎಂದು ಅವರು ಹೇಳಿದರು.

ಇಲ್ಲಿ ಕೊಲೆಯಾದವನ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು. ಇಲ್ಲಿ ಆರೋಪಿ ಯಾರು? ಯಾತಕ್ಕಾಗಿ ಮಾಡಿದ್ದಾನೆ ಕೃತ್ಯ ಎಸಗಿದ್ದಾನೆ ಎಂಬ ಸತ್ಯ ಹೊರಬಂದು ಶಿಕ್ಷೆ ಆಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ಒಂದು ಜೀವ ಹುಟ್ಟಿತು, ಒಂದು ಜೀವ ಹೋಯಿತು ಎಂಬುದನ್ನು ನಾನು ಯಾವುದೇ ಸ್ಥಳವನ್ನು ಆಧರಿಸಿ ಪ್ರಾಮುಖ್ಯತೆ ನೀಡಲು ಸಾಧ್ಯವಿಲ್ಲ. ಚಿತ್ರದುರ್ಗ, ಶಿವಮೊಗ್ಗ ಯಾವುದೇ ಆಗಿರಲಿ ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿಯೂ ಅನ್ಯಾಯವಾದರೆ ಅದಕ್ಕೆ ನ್ಯಾಯ ಸಿಗಲಿ ಎಂಬುದೇ ನಮ್ಮ ವಾದವಾಗಿದೆ ಎಂದು ಸುದೀಪ್ ತಿಳಿಸಿದರು.

ರಾಜ್ಯದಲ್ಲಿ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಚಿಕ್ಕ ಚಿಕ್ಕ ವಿಚಾರಗಳಿಗೂ ಚಿತ್ರರಂಗದ ಮೇಲೆ ಏನಾದರೂ ಒಂದು ಬರುತ್ತದೆ. ಜನ ಬರಲಿಲ್ಲವೆಂದರೂ ಚಿತ್ರರಂಗ, ಹೋರಾಟಕ್ಕೆ ಬರಲಿಲ್ಲ ಎಂದರೂ ಚಿತ್ರರಂಗ ಎಂಬುದರ ಮೇಲೆ ಆರೋಪ ಮಾಡುತ್ತಿರುವುದಕ್ಕೆ ಒಂದು ಕ್ಲೀನ್ ಚಿಟ್ ಸಿಗಬೇಕು. ಚಿತ್ರರಂಗದಲ್ಲಿ ಎಲ್ಲ ಬಗೆಯ ಕಲಾವಿದರು ಇದ್ದಾರೆ. ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಕ್ಕರೆ ಚಿತ್ರರಂಗವೂ ಸಂತಸ ಪಡುತ್ತದೆ ಎಂದು ಸುದೀಪ್ ಹೇಳಿದರು.

ಈ ಪ್ರಕರಣ ಸಂಬಂಧ ಚಿತ್ರರಂಗದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನಾವೆಲ್ಲರೂ ನಿಲುವು ಕೈಗೊಂಡು ನಗೆಪಾಟಲಿಗೀಡಾಗಿದ್ದೇನೆ. ಯಾರೋ ಒಬ್ಬರು ಹಲ್ಲೆ ಮಾಡಿದ್ದಾರೆಂದು ಬೇರೊಬ್ಬರ ಮೇಲೆ ಆರೋಪ ಮಾಡಿರುತ್ತಾರೆ. ಆಗ ನಾವು ಅವರ ಬಗ್ಗೆ ನಿಲುವು ಕೈಗೊಂಡ ನಂತರ ಹೊಡೆದಾಡಿಕೊಂಡ ಇಬ್ಬರೂ ಒಂದಾಗುವ ಮೂಲಕ ನಿಲುವು ಕೈಗೊಂಡವರನ್ನು ಜೋಕರ್ಸ್ ಮಾಡುತ್ತಾರೆ. ಹೀಗಾಗಿ, ಯಾವುದೇ ನಿಲುವು ಬಗ್ಗೆ ಕೇಳಬೇಡಿ ಎಂದು ಹೇಳಿದರು.

ಸುಖಾ ಸುಮ್ಮನೇ ಯಾರನ್ನೂ ಬ್ಯಾನ್ ಮಾಡೋಕಾಗಲ್ಲ: ನಾವುಗಳು ಯಾರೂ ಕಾನೂನಲ್ಲ. ಚಿತ್ರರಂಗದಿಂದ ಒಬ್ಬರನ್ನು ಸುಖಾಸುಮ್ಮನೇ ಬ್ಯಾನ್ ಮಾಡೋಕೆ ಆಗುವುದಿಲ್ಲ. ಈ ಪ್ರಕರಣದಿಂದ ಹೊರಗೆ ಬಂದರೆ ಬ್ಯಾನ್ ಎನ್ನುವ ಪದವೇ ಬರುವುದಿಲ್ಲ. ಕೆಲವು ಹಿರಿಯರು ಕುಳಿತುಕೊಂಡು ತೀರ್ಮಾನ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ನನ್ನ ಮೇಲೆಯೂ ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈಗ ಬ್ಯಾನ್ ವಿಚಾರವನ್ನು ಕೈಬಿಡಿ. ಇದೆಲ್ಲವೂ ಸೆಕೆಂಡರಿ ಆದ್ಯತೆಯಾಗಿದೆ ಎಂದು ನಟ ಸುದೀಪ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News