ಮೂಡಿಗೆರೆ | ಬೀಡಾಡಿ ದನಗಳಿಗೆ ಢಿಕ್ಕಿಯಾಗಿ ರಸ್ತೆಗೆ ಬಿದ್ದ ಬೈಕ್ ಸವಾರರ ಮೇಲೆ ಹರಿದ ಲಾರಿ; ಸವಾರ ಮೃತ್ಯು, ಮಹಿಳೆ ಗಂಭೀರ

Update: 2023-11-04 15:09 GMT

ಚಿಕ್ಕಮಗಳೂರು, ನ.4: ಬೈಕ್‍ನಲ್ಲಿ ಧರ್ಮಸ್ಥಳಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಬೀಡಾಡಿ ದನಗಳಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ಬೈಕ್ ಸವಾರರ ಮೇಲೆ ಗ್ಯಾಸ್ ಲಾರಿ ಹರಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಶನಿವಾರ ರಾತ್ರಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮೃತ ವ್ಯಕ್ತಿಯಲ್ಲಿ ಕೊಪ್ಪ ತಾಲೂಕಿನ ಕಲ್ಕೆರೆ ಗಾಮದ ವಿಶ್ವೇಂದ್ರರಾವ್(48) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಅದೇ ಗ್ರಾಮದ ಲಕ್ಷ್ಮೀ(32) ಎಂದು ತಿಳಿದು ಬಂದಿದೆ.

ಶನಿವಾರ ಧರ್ಮಸ್ಥಳಕ್ಕೆ ಹೋಗಿದ್ದ ವಿಶ್ವೇಂದ್ರರಾವ್ ಬೈಕ್‍ನಲ್ಲಿ ಹಿಂದಿರುಗುತ್ತಿದ್ದ ವೇಳೆ ದಾರಿ ಮಧ್ಯೆ ಲಕ್ಷ್ಮೀ ಸಿಕ್ಕಿದ್ದು, ಇಬ್ಬರು ಬೈಕ್‍ನಲ್ಲಿ ಧರ್ಮಸ್ಥಳದಿಂದ ಮೂಡಿಗೆರೆಗೆ ಬರುತ್ತಿದ್ದ ವೇಳೆ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಕೆಎಸ್ಸಾರ್ಟಿಸಿ ಬಸ್ ಡಿಪೋದ ಬಳಿ ರಸ್ತೆ ಮಧ್ಯೆ ಬೀಡಾಡಿ ದನಗಳ ಅಡ್ಡ ಬಂದಿವೆ. ಬೀಡಾಡಿ ದನಗಳಿಗೆ ಗುದ್ದಿದ ಬೈಕ್ ರಸ್ತೆಗೆ ಬಿದ್ದಿದ್ದು, ಈ ವೇಳೆ ಬೈಕ್‍ನಲ್ಲಿದ್ದ ಇಬ್ಬರೂ ರಸ್ತೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಅತೀ ವೇಗದಲ್ಲಿ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಇಬ್ಬರ ಮೇಲೆ ಹರಿದಿದೆ ಎಂದು ಹೇಳಲಾಗಿದೆ. 

ಲಾರಿ ಹರಿದ ರಭಸಕ್ಕೆ ರಸ್ತೆ ಮೇಲಿದ್ದ ವಿಶ್ವೇಂದ್ರ ರಾವ್ ದೇಹ ಛಿದ್ರವಾಗಿದ್ದರೇ, ಮಹಿಳೆ ಕಾಲುಗಳು ತುಂಡಾಗಿ ತಲೆಗೂ ಗಂಭೀರಗಾಯವಾಗಿದೆ ಎಂದು ತಿಳಿದು ಬಂದಿದೆ. 

ಘಟನಾ ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಮೂಡಿಗೆರೆ ಆಸ್ಪತ್ರೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News