ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ಪೂರ್ಣ: ಸ್ಪೀಕರ್ ಯು.ಟಿ.ಖಾದರ್

Update: 2023-12-03 17:23 GMT

ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನವು ಡಿ.4ರಿಂದ 15ರವರೆಗೆ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ರಾಜ್ಯದ ಎಲ್ಲ ಭಾಗಗಳ ವಿಷಯಗಳ ಚರ್ಚೆಯ ಜೊತೆಗೆ ಉತ್ತರ ಕರ್ನಾಟಕ ಭಾಗಕ್ಕೆ ಪ್ರಯೋಜನವಾಗುವ ಚರ್ಚೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ರವಿವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದನದ ಕಲಾಪಗಳಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ವಿಷಯಗಳೊಂದಿಗೆ ಉತ್ತರ ಕರ್ನಾಟಕದ ಪ್ರಗತಿಯ ಕುರಿತ ಚರ್ಚೆಗನ್ನು ಕೈಗೆತ್ತಿಕೊಳ್ಳಲಾಗುವುದು. ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಆಹಾರ, ವಸತಿ ಸೇರಿದಂತೆ ಎಲ್ಲ ರೀತಿಯ ಉತ್ತಮ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಸುವರ್ಣ ವಿಧಾನಸೌಧದ ಸೌಂದರ್ಯ ಹೆಚ್ಚಿಸಲು ಈ ವೈಭವಯುತ ಕಟ್ಟಡಕ್ಕೆ ಕಾಯಂ ಎಲ್‍ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಮುಂದಿನ 10 ವರ್ಷಗಳ ಕಾಲ ನಿರ್ವಹಣೆಗೆ ಕ್ರಮವಹಿಸಲಾಗಿದೆ. ಈ ಮುಂಚೆ ಅಧಿವೇಶನದ ಸಂದರ್ಭದಲ್ಲಿ ಮಾತ್ರ ವಿದ್ಯುತ್‍ದೀಪ ಅಲಂಕಾರ ಮಾಡಲಾಗುತ್ತಿತ್ತು. ಇನ್ನುಮುಂದೆ ಅಧಿವೇಶನದ ಜೊತೆಗೆ ಶನಿವಾರ, ರವಿವಾರ ಮತ್ತು ರಾಷ್ಟ್ರೀಯ ಹಬ್ಬಗಳ ದಿನಗಳಂದು ವಿದ್ಯುತ್‍ದೀಪಗಳ ಅಲಂಕಾರ ಮಾಡುವ ಮುಖಾಂತರ ವಿದ್ಯಾರ್ಥಿಗಳು, ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ಅವರು ತಿಳಿಸಿದರು.

ಕಲಾಪಗಳ ವೀಕ್ಷಣೆ ವಿದ್ಯಾರ್ಥಿಗಳ ಅವಧಿ ಹೆಚ್ಚಳ: ಈ ಹಿಂದೆ ವಿಧಾನಮಂಡಲದ ಉಭಯ ಸದನಗಳ ಕಲಾಪಗಳ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಕೇವಲ 10 ನಿಮಿಷಗಳ ಅವಧಿ ನೀಡಲಾಗುತ್ತಿತ್ತು. ಈ ಬಾರಿ ಈ ಅವಧಿಯನ್ನು 20 ರಿಂದ 30 ನಿಮಿಷಗಳಿಗೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

ಕಲಾಪಗಳ ವೀಕ್ಷಣೆಗೆ ಆಗಮಿಸುವ ವೀಕ್ಷಕರಿಗೆ ಕಲಾಪಗಳ ವೀಕ್ಷಣೆಗೂ ಮುನ್ನ ಆಡಿಟೋರಿಯಂನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ವ್ಯವಸ್ಥೆ ಕುರಿತು ತಿಳಿಸಿಕೊಡಲಾಗುವುದು ಮತ್ತು ಸಾಕ್ಷ್ಯಚಿತ್ರದ ಮೂಲಕ ಅವರಿಗೆ ಅರಿವು ಮೂಡಿಸಲಾಗುವುದು. ಈ ಸಂದರ್ಭದಲ್ಲಿ ಮಕ್ಕಳಿಗೆ ತಂಪುಪಾನೀಯ ಮತ್ತು ಚಾಕ್‍ಲೇಟ್‍ಗಳನ್ನು ನೀಡಿ ಜನತಂತ್ರ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿ ಹೆಚ್ಚಿಸಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.

ಬೇಗ ಬರುವ ಶಾಸಕರಿಗೆ ಬಹುಮಾನ: ವಿಧಾನಸಭಾ ಕಲಾಪಕ್ಕೆ ಅಗತ್ಯವಿರುವ ಕೋರಂ ಹಾಜರಾತಿಯನ್ನು ನಿಗದಿತ ಸಮಯದೊಳಗೆ ಸೇರುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊದಲು ಬರುವ 25 ಶಾಸಕರಿಗೆ ಅವರು ಬೇಗ ಬಂದ ದಿನಗಳ ಹಾಜರಾತಿ ಆಧರಿಸಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಲಾಂಛನಗಳಿರುವ ಟೀ ಕಪ್ ಮತ್ತು ಸಾಸರ್ ಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಇದುವರೆಗೆ 2512 ಪ್ರಶ್ನೆಗಳು ಮತ್ತು ಗಮನಸೆಳೆಯುವ ಸೂಚನೆಗಳು ಸ್ವೀಕೃತವಾಗಿವೆ. 3 ಸುಗ್ರೀವಾಜ್ಞೆಗಳು ಮಸೂದೆ ರೂಪದಲ್ಲಿ ಮಂಡನೆಯಾಗಲಿವೆ. ಕಲಾಪ ಸಲಹಾ ಸಮಿತಿ ಸಭೆಯ ಮುಂದೆ ಹೆಚ್ಚಿನ ಮಸೂದೆಗಳು, ಬಿಲ್‍ಗಳು ಬರುವ ನಿರೀಕ್ಷೆ ಇದೆ ಎಂದು ಯು.ಟಿ.ಖಾದರ್ ಹೇಳಿದರು.

ಸಾಂಸ್ಕತಿಕ ಕಲೆಗಳ ಪ್ರದರ್ಶನ: ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷಗಳಾಗಿರುವ ಈ ಸುವರ್ಣ ಸಂಭ್ರಮದ ಆಚರಣೆಯ ಭಾಗವಾಗಿ ಸುವರ್ಣ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮುಂಭಾಗದಲ್ಲಿ ಈ ಬಾರಿ ಪ್ರತಿದಿನ ಬೆಳಗ್ಗೆ 9ರಿಂದ 11 ರವರೆಗೆ ವಿದ್ಯಾರ್ಥಿಗಳಿಂದ ರಾಜ್ಯದ ವಿವಿಧಭಾಗಗಳ ಸಾಂಸ್ಕತಿಕ ಕಲೆಗಳ ಬಿಂಬಿಸುವ ಪ್ರದರ್ಶನ ನಡೆಯಲಿದೆ. ಡಿ.12ರಂದು ಆಳ್ವಾಸ್ ಸಂಸ್ಥೆಯ ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳ ಅನಾವರಣಗೊಳ್ಳಲಿವೆ ಎಂದು ಸ್ಪೀಕರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News