ಪೂರ್ಣಗೊಂಡ ಬಿಬಿಎಂಪಿ ಕಾಮಗಾರಿಗಳ ಶೇ.50ರಷ್ಟು ಹಣ ಬಿಡುಗಡೆ: ಡಿ.ಕೆ.ಶಿವಕುಮಾರ್

Update: 2023-09-04 16:29 GMT

ಬೆಂಗಳೂರು, ಸೆ.4: ಪೂರ್ಣಗೊಂಡ ಬಿಬಿಎಂಪಿ ಕಾಮಗಾರಿಗಳ ಶೇ.50ರಷ್ಟು ಹಣ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಸಿಎಂ ಗೃಹಕಚೇರಿ ಕೃಷ್ಣಾ  ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ಪೂರ್ಣಗೊಂಡಿರುವ ಕೆಲಸಗಳಿಗೆ ಆದ್ಯತೆ ಮೇರೆಗೆ ಶೇ.50ರಷ್ಟು ಹಣ ಬಿಡುಗಡೆ ಮಾಡಿ, ಬಾಕಿ ಹಣ ಸಮಿತಿಯ ವರದಿ ಬಂದ ನಂತರ ಬಿಡುಗಡೆಗೆ ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದರು.

ಇದೇ ಸೆ.7ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದರ ನೆನಪಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ, ಸಂಜೆ 5 ರಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ" ಎಂದು ಮಾಹಿತಿ ನೀಡಿದರು.

"ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎಂದು ಯೋಚನೆ ಇತ್ತು, ನಾಗರಿಕರಿಗೆ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು ಕೈಬಿಡಲಾಯಿತು. ಸೆ.7 ರಂದು ಕ್ಯಾಬಿನೆಟ್ ಸಭೆ ಇರುವ ಕಾರಣ ಜಿಲ್ಲಾ ಮಂತ್ರಿಗಳು ಆಯಾಯ ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ" ಎಂದರು.

ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು ಎಂದು ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆಯೇ ಎನ್ನುವ ಪ್ರಶ್ನೆಗೆ “ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ವಿಚಾರವಾಗಿ ಯಾವುದೇ ತೀರ್ಮಾನ ಸದ್ಯಕ್ಕಿಲ್ಲ, ಆಡಳಿತ ದೃಷ್ಟಿಯಿಂದ ಸುಲಭ ಆಗುತ್ತದೆ ಎಂದು ಮನವಿ ನೀಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.

ತೇಜಸ್ವಿನಿ ಅವರ ಜತೆ ರಾಜಕೀಯ ಚರ್ಚೆ ಇಲ್ಲ: ತೇಜಸ್ವಿನಿ ಅನಂತಕುಮಾರ್ ಅವರ ಭೇಟಿ ರಾಜಕೀಯ ವಿಚಾರಗಳಿಗೆ ಆಗಿದೆಯೇ ಎನ್ನುವ ಪ್ರಶ್ನೆಗೆ “ಸಾಧ್ಯವೇ ಇಲ್ಲ, ನಮ್ಮ ನಡುವೆ ಯಾವುದೇ ರಾಜಕೀಯ ವಿಚಾರಗಳು ಚರ್ಚೆಗೆ ಬಂದಿಲ್ಲ. ರಾಜಕೀಯ ವಿಚಾರ ಮಾತನಾಡಿದ್ದೇವೆ ಎಂದು ಯಾರಾದರೂ ಹೇಳಿದ್ದರೆ ಅದು ಸುಳ್ಳು. ತೇಜಸ್ವಿನಿ ಅವರು ಅನಂತ್‍ಕುಮಾರ್ ಅವರ ಜನ್ಮದಿನ, ಅನ್ನಭಾಗ್ಯ ವಿಚಾರಗಳ ಬಗ್ಗೆ ನನ್ನ ಜತೆ ಚರ್ಚೆ ಮಾಡಿದರು. ಯಾರು ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲಾಯಿತು ಎಂಬುದು ಸುಳ್ಳು ಸುದ್ದಿ" ಎಂದು ಡಿ.ಕೆ.ಶಿವಕುಮಾರ ಅವರು ಪುನರುಚ್ಚರಿಸಿದರು.

ಕಳೆದ 3 ತಿಂಗಳಿನಲ್ಲಿ 122 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ “ಎಲ್ಲಿದೆ ಆ ವರದಿ ನನಗೆ ನೀಡಿ. ಎಲ್ಲಾ ಸುಳ್ಳು ಸುದ್ದಿ, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ” ಎಂದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News