ಶಿಕಾರಿಪುರ ಹಾಗೂ ಸೊರಬ ನನ್ನ ಎರಡು ಕಣ್ಣುಗಳಿದ್ದಂತೆ‌: ಸಚಿವ ಮಧುಬಂಗಾರಪ್ಪ

Update: 2023-09-13 16:02 GMT

ಶಿಕಾರಿಪುರ (ಸೆ.13): ಬಿಜೆಪಿಯ ಭಾವನಾತ್ಮಕ ರಾಜಕೀಯಕ್ಕೆ ಜನರೇ ಬ್ರೇಕ್ ಹಾಕಬೇಕು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಕರೆ ನೀಡಿದರು.

ಶಿಕಾರಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ಮೂಲಕ ಬದ್ಧತೆಯನ್ನು ಪ್ರದರ್ಶಿಸಿದೆ ಎಂದರು.

ರಾಜ್ಯದಲ್ಲಿ ಬಡವರ ಪರವಾದ ಸರ್ಕಾರ ಇದ್ದರೆ ಭಾವನಾತ್ಮಕವಾಗಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದ ಅವರು, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ಭರವಸೆ ಇದೆ. ದೇವರಾಜ ಅರಸು, ಬಂಗಾರಪ್ಪ ರವರು ಭೂ ರೈತರಿಗೆ ಭೂಮಿ ಕೊಟ್ಟರು, ಉಚಿತ ವಿದ್ಯುತ್ ಕೊಟ್ಟರು, ರೈತರಿಗೆ ಹಕ್ಕು ಪತ್ರ ಕೊಟ್ಟರು, ಅವರ ಕೆಲಸಗಳಿಂದಾಗಿಯೇ ಇಂದು ಅವರು ಎಂದಿಗೂ ಜನರ ಮನಸ್ಸಿನಲ್ಲಿದ್ದಾರೆ.ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿರುವ ಬಡವರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಕಳೆದ ಚುನಾವಣೆಯಲ್ಲಿ ಶಿಕಾರಿಪುರ ಕಾಂಗ್ರೆಸ್ ಪಕ್ಷದ ಶಕ್ತಿ ತೋರಿಸಿದ್ದೀರಿ.ನನಗೆ ಶಿಕಾರಿಪುರ ಹಾಗೂ ಸೊರಬ ಬೇರೆ ಬೇರೆ ಅಲ್ಲ. ಎರಡು ಕಣ್ಣುಗಳಿದ್ದಂತೆ‌.ಇಲ್ಲಿ ಪಕ್ಷದ ಅಭ್ಯರ್ಥಿ ಸೋತಿರಬಹುದು. ಅದ್ರೇ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ.ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಶಿಕಾರಿಪುರ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ನೀರಾವರಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅರಂಭವಾಗಿದ್ದವು, ತದ ನಂತರ ಬಂದವರು, ಅನುದಾನ ನೀಡಿ ಜಾರಿಗೊಳಿಸಿದ್ದಾರೆ . ಇನ್ನೂ ಆಗಬೇಕಿರುವ ಕಾಮಗಾರಿಯನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು.

ಶಿಕಾರಿಪುರ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿದ್ದು, ಈಗ ಎಲ್ಲಾ ಬಗೆಹರಿದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಶಿಕಾರಿಪುರದಲ್ಲಿ ಕಾಂಗ್ರೆಸ್ ಮುಖಂಡರ ಮಾತುಗಳಿಗೆ ಮನ್ನಣೆ ಸಿಗಲಿದೆ. ಇಲ್ಲಿ ನಿಮ್ಮದೇ ಸರ್ಕಾರವಿದ್ದು, ನೀವೆ ನನಗೆ ಮಾಡಿದ ಅಭಿನಂದನೆ ನಿಮಗೆ ಸಲ್ಲಬೇಕು. ಮುಂದಿನ ಎಲ್ಲಾಚುನಾವಣೆಗಳಲ್ಲೂ ಜಯ ನಿಶ್ಚಿತ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಮಾತನಾಡಿ, ಸಮ್ಮಿಶ್ರ ಸರ್ಕಾರವಿದ್ದ ಸಮಯದಲ್ಲಿ ಮಧು ಬಂಗಾರಪ್ಪ ಅವರ ಪಾದಯಾತ್ರೆ ಫಲದಿಂದ ಇಂದು ಶಿಕಾರಿಪುರದಲ್ಲಿ ಏತನೀರಾವರಿ ಪೂರ್ಣಗೊಂಡಿವೆ. ಶಿಕಾರಿಪುರದ ನಕಲಿ ಹುಲಿಗಳು ಸುಳ್ಳು ಹೇಳುತ್ತಾ ಕಾಲ ಕಳೆಯುತಿದ್ದಾರೆ ಎಂದು ಪರೋಕ್ಷವಾಗಿ ಬಿ ಎಸ್ ವೈ ಕುಟುಂಬಕ್ಕೆ ಕುಟುಕಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂದರೇಶ್ ಹೆಚ್ ಎಸ್ ಮಾತನಾಡಿ,ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಗೆ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಕಲೇಶ, ಬಲ್ಕೀಶ್ ಬಾನು, ರಮೇಶ್, ಆರ್ ಪ್ರಸನ್ನ ಕುಮಾರ್, ಆರ್ ಎಂ ಮಂಜುನಾಥ್ ಗೌಡ, ಎಸ್ ಕೆ ಮರಿಯಪ್ಪ, ನಗರದ ಮಹಾದೇಪ್ಪ, ಕಲಗೋಡು ರತ್ನಾಕರ್ ಇತರರು ಉಪಸ್ಥಿತರಿದ್ದರು.

ʼಗಂಡುಗಲಿ ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ಮಂತ್ರಿ ಆಗಿದ್ದಾರೆ ಇನ್ನು ಯಾರಿಗೂ ಹೆದರುವ ಅಗತ್ಯ ಇಲ್ಲ. ಶಿಕಾರಿಪುರ ಕಾಂಗ್ರೆಸ್ ವಿಜೃಂಭಿಸುತ್ತದೆʼ

- ಗೋಣಿ ಮಾಲ್ತೇಶ್, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

ʼಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರು, ಬಡವರ ಬದುಕಿಗೆ ಭದ್ರತೆ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಎರಡು ಸಾವಿರ ರೂ.ವನ್ನು ಹಣವನ್ನು ನೀಡುವ ಮೂಲಕ ಆರ್ಥಿಕ ಶಕ್ತಿ ನೀಡಿದೆ.ಇದರಿಂದ ಬಿಜೆಪಿಗೆ ಭಯ ಶುರುವಾಗಿದೆ. ಬಿಜೆಪಿ -ಜೆಡಿಎಸ್ ಮೈತ್ರಿ ಕುರುಡನ ಹೆಗಲ ಮೇಲೆ ಕುಂಟನ ಸವಾರಿ,ಯಾರು ಯಾರನ್ನು ಯಾವತ್ತು ಕೆಡವುತಾರೊ ಗೊತ್ತಿಲ್ಲʼ

-ಆಯನೂರು ಮಂಜುನಾಥ್, ಮಾಜಿ ಸಂಸದ




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News